ನೇತ್ರಾವತಿ ಶಿಖರ- ದಕ್ಷಿಣ ಕನ್ನಡದ ಮರೆತಿರುವ ಸ್ವರ್ಗ!

ನೇತ್ರಾವತಿ ಶಿಖರದಲ್ಲಿ ಲೇಖಕರು
ದಕ್ಷಿಣ ಕನ್ನಡದ ಹಸಿರು ಪರ್ವತಗಳಲ್ಲಿ ಮರೆತು ಕುಳಿತಿರುವ ಒಂದು ಸ್ವರ್ಗದ ತುಂಡು…ಅದು ನೇತ್ರಾವತಿ ಶಿಖರ. ಕಾಡು ಮೇಡು, ಬೆಟ್ಟ-ಗುಡ್ಡಗಳು, ನದಿದಾಟುವಿಕೆ, ಜಿಗಣೆಗಳ ಕಾಟ…ಇವೆಲ್ಲವೂ ಒಟ್ಟಾಗಿ ಬಂದಾಗ ಮಾತ್ರ ನಿಜವಾದ ಚಾರಣದ ಅನುಭವ ಸಿಗುತ್ತದೆ. ಅಂಥ ಅನೇಕ ಸಾಹಸಮಯ ಚಾಲೆಂಜ್‌ಗಳನ್ನು ಹೊತ್ತುಕೊಂಡಿರುವ ಚಾರಣಪ್ರಿಯರ ಕನಸಿನ ತಾಣವೇ ನೇತ್ರಾವತಿ ಶಿಖರ.

ಚಿಕ್ಕ ವಯಸ್ಸಿನಿಂದಲೂ ಚಾರಣದ ಮೇಲೆ ಪ್ರೀತಿ ಬೆಳೆಸಿಕೊಂಡಿರುವ ನಾನು, ನನ್ನ ಮೂವರು ಸ್ನೇಹಿತರ ಜೊತೆಗೂಡಿ ಈ ಅದ್ಭುತ ಶಿಖರವನ್ನು ಏರಲು ನಿರ್ಧರಿಸಿದೆವು. ನಮ್ಮ ಮನಸ್ಸಿನಲ್ಲಿ ಒಂದೇ ಪ್ರಶ್ನೆ— ಪ್ರಕೃತಿಯ ಮಡಿಲಿನಲ್ಲಿ ನಿಜವಾದ ಸ್ವರ್ಗ ಹೇಗಿರಬಹುದು? ಈ ಪ್ರಶ್ನೆಗೆ ಉತ್ತರ ಹುಡುಕಲು ನಾವು ಹೊರಟದ್ದು ದಕ್ಷಿಣ ಕನ್ನಡದ ಗಹನ ಅರಣ್ಯದತ್ತ…

ಚಾರಣದ ಆರಂಭ – ಅರಣ್ಯದ ನಡಿಗೆ

ಈ ಚಾರಣವನ್ನು ಮಾಡಲು ಮೊದಲ ಹೆಜ್ಜೆ ಎಂದರೆ ಅರಣ್ಯ ಇಲಾಖೆಯ 'ಅರಣ್ಯ ವಿಹಾರ್' ವೆಬ್‌ಸೈಟ್‌ನಲ್ಲಿ ಮುಂಚಿತವಾಗಿ ಬುಕ್ಕಿಂಗ್ ಮಾಡುವುದು. ನಾವು ಕೂಡ ಮೂರು ದಿನಗಳ ಮುಂಚೆಯೇ ಬುಕ್ಕಿಂಗ್ ಮಾಡಿಕೊಂಡು, ಬೆಳಿಗ್ಗೆ 6 ಗಂಟೆಗೆ ಸಂಸೆ ಗ್ರಾಮದ ಅರಣ್ಯ ಚೆಕ್‌ಪೋಸ್ಟ್‌ನಲ್ಲಿ ಲಾಗಿನ್ ಮಾಡಿ ನಮ್ಮ ಚಾರಣವನ್ನು ಪ್ರಾರಂಭಿಸಿದೆವು.

ಆ ಕ್ಷಣದಿಂದಲೇ ನಾವು ಪ್ರವೇಶಿಸಿದ್ದು ಮತ್ತೊಂದು ಲೋಕಕ್ಕೆ… ಹಚ್ಚಹಸಿರು ಮರಗಳು, ಗಾಳಿಯಲ್ಲಿ ಹರಡುವ ಮಣ್ಣಿನ ಸುವಾಸನೆ, ಕಾಡಿನ ನಿಶ್ಶಬ್ದತೆ—ಇವೆಲ್ಲವೂ ಮನಸ್ಸಿಗೆ ವಿಚಿತ್ರವಾದ ಶಾಂತಿ ನೀಡುತ್ತಿತ್ತು. ಎತ್ತ ನೋಡಿದರೂ ಕೇವಲ ಹಸಿರು ಸೊಬಗು.
ಆದರೆ ಪ್ರಕೃತಿ ಕೊಡುವ ಸೌಂದರ್ಯದ ಜೊತೆಗೆ ಸಣ್ಣ ಸಣ್ಣ ಪರೀಕ್ಷೆಗಳೂ ಇವೆ!

ನಾವು ನಡೆಯುತ್ತಾ ಇದ್ದಂತೆ, ಜಿಗಣೆಗಳು (leeches) ಕಾಲಿಗೆ ಅಂಟಿಕೊಂಡು ರಕ್ತ ಹೀರಲು ಶುರುಮಾಡಿದವು. ಸ್ವಲ್ಪ ನೋವು, ಸ್ವಲ್ಪ ಅಸಹನೆ…ಆದರೆ ಅದೇ ಚಾರಣದ ರೋಮಾಂಚನ.
ಗೆಳೆಯರ ಜೊತೆ ಜಾಲಿ ಜಾಲಿ!

ನೇತ್ರಾವತಿ ನದಿ – ನಿಜವಾದ ಚಾಲೆಂಜ್

ಚಾರಣದ ಮಧ್ಯದಲ್ಲಿ ನಮಗೆ ಎದುರಾಗಿದ್ದು ನೇತ್ರಾವತಿ ನದಿ. ಈ ನದಿಯನ್ನು ದಾಟುವುದು ಸುಲಭವಲ್ಲ. ನೀರಿನ ಪ್ರವಾಹ, ಜಾರುವ ಕಲ್ಲುಗಳು, ಅಸ್ಥಿರ ನೆಲ- ಇವೆಲ್ಲವೂ ಸೇರಿ ಇದು ಚಾರಣದ ಅತ್ಯಂತ ರೋಚಕ ಭಾಗ.

ನಾವು ನಾಲ್ವರೂ ಸ್ನೇಹಿತರು ಕೈ ಹಿಡಿದು ನಿಧಾನವಾಗಿ ನದಿಯನ್ನು ದಾಟಿದೆವು. ಆದರೆ ಅಲ್ಲಿ ನಿಂತು ಕೇವಲ ದಾಟುವುದಷ್ಟೇ ಅಲ್ಲ…ನದಿಯ ತಂಪಾದ ನೀರಿನಲ್ಲಿ ಸ್ವಲ್ಪ ಹೊತ್ತು ಆಟವಾಡಿ, ಪ್ರಕೃತಿಯ ಸೊಬಗನ್ನು ಸವಿದು, ಕೆಲವು ಫೋಟೋಗಳನ್ನು ಕ್ಲಿಕ್ಕಿಸಿ, ಮತ್ತೆ ಮುಂದಕ್ಕೆ ಹೊರಟೆವು. ಆ ಕ್ಷಣಗಳು ನಮ್ಮ ನೆನಪುಗಳಲ್ಲಿ ಸದಾಕಾಲ ಉಳಿಯುವಂತವು.

ಇದನ್ನೂ ಓದಿ: ಕುಂತಿಬೆಟ್ಟ – ಕಗ್ಗತ್ತಲಲ್ಲಿಯೂ ಕರೆದೊಯ್ಯುವ ಸಾಹಸಮಯ ಗಿರಿ

ಶಿಖರದತ್ತ ಏರುವುದು – ತಾಳ್ಮೆಯ ಪರೀಕ್ಷೆ

ನೇತ್ರಾವತಿ ಶಿಖರವು ಸುಮಾರು 1,500 ಮೀಟರ್ (ಸುಮಾರು 4,900 ಅಡಿ) ಎತ್ತರದಲ್ಲಿದೆ. ಅಂತಿಮ ಹಂತದಲ್ಲಿ ಬೆಟ್ಟವನ್ನು ಏರುವುದು ದೇಹದ ತಾಳ್ಮೆಯ ಕಠಿಣ ಪರೀಕ್ಷೆಯೇ ಸರಿ.

ಪ್ರತಿ ಹೆಜ್ಜೆಯಲ್ಲೂ ಉಸಿರಾಟ ವೇಗವಾಗುತ್ತದೆ… ಕಾಲುಗಳು ಭಾರವಾಗುತ್ತವೆ… ಆದರೆ ಮನಸ್ಸು ಮಾತ್ರ ಹುರಿದುಂಬಿಸುತ್ತಿರುತ್ತದೆ- ಇನ್ನೊಂದು ಹೆಜ್ಜೆ… ಇನ್ನೂ ಸ್ವಲ್ಪ ದೂರ…

ಸುತ್ತಲೂ ಹರಡುವ ಮೌನ, ತಂಪಾದ ಗಾಳಿ ಮತ್ತು ದೂರದಲ್ಲೇ ಕಾಣಿಸುವ ಹಸಿರು ಪರ್ವತಗಳು ನಮ್ಮನ್ನು ಮುಂದುವರೆಯಲು ಪ್ರೇರೇಪಿಸುತ್ತವೆ. ಅಂತಿಮವಾಗಿ ನಾವು ಶಿಖರವನ್ನು ತಲುಪಿದ ಕ್ಷಣ— ಆ ಸಂತೋಷ, ಆ ತೃಪ್ತಿ… ಅದನ್ನು ವರ್ಣಿಸಲು ಪದಗಳೇ ಸಾಲದು.

ಆಕಾಶ ಇಷ್ಟೇ ಯಾಕಿದೆಯೋ?

ಶಿಖರದ ಮೇಲೆ ಕಾಣುವ ಅದ್ಭುತ ದೃಶ್ಯ

ಶಿಖರದ ತುದಿಯಲ್ಲಿ ನಿಂತು ನೋಡಿದಾಗ ಪ್ರಕೃತಿ ತನ್ನ ಅತ್ಯಂತ ಸುಂದರ ರೂಪವನ್ನು ಅನಾವರಣಗೊಳಿಸುತ್ತದೆ. ಅಲ್ಲಿ ಕುದುರೆಮುಖ ಶಿಖರ, ಗಡಾಯಿಕಲ್ಲು ಶಿಖರ (ಜಮಲಾಬಾದ್ ಕೋಟೆ) ಮತ್ತು ರಾಣಿಝರಿ ಬೆಟ್ಟಗಳಂತಹ ಅದ್ಭುತ ದೃಶ್ಯಗಳು ಕಣ್ಣಿಗೆ ಹಬ್ಬವಾಗುತ್ತವೆ. ಕೈಗೆಟಕುವಷ್ಟು ಹತ್ತಿರವಾಗಿ ಹರಿದುಹೋಗುವ ಮೋಡಗಳು, ತಂಪಾದ ಗಾಳಿ ಮತ್ತು ಎತ್ತ ನೋಡಿದರೂ ಗೋಪುರದಂತೆ ಕಾಣುವ ಪರ್ವತಗಳು ಮನಸ್ಸನ್ನು ಮಂತ್ರಮುಗ್ಧಗೊಳಿಸುತ್ತವೆ. ಆ ಕ್ಷಣದಲ್ಲಿ ಪ್ರಕೃತಿ ಮುಂದೆ ನಾವು ಎಷ್ಟು ಚಿಕ್ಕವರು ಎಂಬುದನ್ನು ನಾವು ಆಳವಾಗಿ ಅನುಭವಿಸುತ್ತೇವೆ.

ಕಾಡುಜೀವಿಗಳು ಮತ್ತು ಜೀವ ವೈವಿಧ್ಯತೆ

ಈ ಪ್ರದೇಶವು ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಗೆ ಸೇರಿರುವುದರಿಂದ ಇಲ್ಲಿ ಸಮೃದ್ಧ ಜೀವ ವೈವಿಧ್ಯತೆ ಕಂಡುಬರುತ್ತದೆ. ಚಾರಣದ ವೇಳೆ ಕಾಡುಕೋಣಗಳು (Gaur), ಜಿಂಕೆಗಳು, ವಿವಿಧ ಪಕ್ಷಿಗಳು ಹಾಗೂ ಅಪರೂಪದ ಸಸ್ಯಗಳನ್ನು ಕಾಣಬಹುದು. ಈ ನೈಸರ್ಗಿಕ ಸಂಪತ್ತು ನಮ್ಮ ಮುಂದೆ ತೆರೆದುಕೊಳ್ಳುವಾಗ, ಪ್ರಕೃತಿಯನ್ನು ಕಾಪಾಡುವುದು ನಮ್ಮ ಜವಾಬ್ದಾರಿ ಎಂಬ ಅರಿವು ಸ್ಪಷ್ಟವಾಗಿ ಮೂಡುತ್ತದೆ.

ಬಂಡೆಕಲ್ಲು ಜಲಪಾತ

ಬಂಡೆಕಲ್ಲು ಜಲಪಾತ- ಮಧ್ಯದಲ್ಲಿನ ಸ್ವರ್ಗ

ಚಾರಣದ ಮಧ್ಯದಲ್ಲಿ ಕಾಣಸಿಗುವ ಇನ್ನೊಂದು ಅದ್ಭುತ ಸ್ಥಳವೆಂದರೆ ಬಂಡೆಕಲ್ಲು ಜಲಪಾತ. ಬಂಡೆಗಳ ಮೇಲೆ ಹರಿದುಬರುವ ನೀರು, ಅದರ ಸದ್ದು, ಸುತ್ತಮುತ್ತಲಿನ ಹಸಿರು ವಾತಾವರಣ- ಇವೆಲ್ಲವೂ ಮನಸ್ಸನ್ನು ಮೋಹಗೊಳಿಸುತ್ತವೆ. ಆದರೆ ಇಲ್ಲಿ ಜಾರುವ ಸಾಧ್ಯತೆ ಹೆಚ್ಚು ಇರುವುದರಿಂದ ತುಂಬಾ ಎಚ್ಚರಿಕೆಯಿಂದ ಸಾಗಬೇಕು.

ಇದನ್ನೂ ಓದಿ: ಸಿಡಿಲು ಮಲ್ಲಿಕಾರ್ಜುನ ಬೆಟ್ಟ – ಪ್ರಕೃತಿ, ಸಾಹಸ ಮತ್ತು ಭಕ್ತಿಯ ಸಂಗಮ

ನೇತ್ರಾವತಿ ನದಿಯ ಹುಟ್ಟುಸ್ಥಳ

ಈ ಶಿಖರದ ಮಹತ್ವ ಇನ್ನೂ ಹೆಚ್ಚಾಗುವುದು ಏಕೆಂದರೆ ಇಲ್ಲಿಯೇ ನೇತ್ರಾವತಿ ನದಿ ಹುಟ್ಟುತ್ತದೆ.

ಈ ನದಿ ದಕ್ಷಿಣ ಕನ್ನಡದ ಜೀವನಾಡಿಯಾಗಿ ಹರಿದು ಅನೇಕ ಜನರಿಗೆ ಜೀವ ನೀಡುತ್ತದೆ.
ಹೀಗಾಗಿ ಈ ಶಿಖರ ಕೇವಲ ಚಾರಣ ಸ್ಥಳವಲ್ಲ—ಇದು ಪ್ರಕೃತಿಯ ಒಂದು ಪವಿತ್ರ ಕೇಂದ್ರ.

ಚಾರಣ ಮಾಹಿತಿ

ನೇತ್ರಾವತಿ ಶಿಖರಕ್ಕೆ ಹೋಗಲು ಕೆಲವು ಪ್ರಮುಖ ನಿಯಮಗಳು:

  • ಬುಕಿಂಗ್ ಕಡ್ಡಾಯ: ಅರಣ್ಯ ಇಲಾಖೆಯ ವೆಬ್‌ಸೈಟ್‌ನಲ್ಲಿ ಕನಿಷ್ಠ 3 ದಿನಗಳ ಮುಂಚೆ

  • ಚಾರ್ಜ್: ಸುಮಾರು ₹500

  • ಗೈಡ್ ಕಡ್ಡಾಯ: ₹1000 (ಒಂದು ಗುಂಪಿಗೆ)

  • ಸಮಯ: 5–6 ಗಂಟೆಗಳು (ಒನ್ ವೇ)

  • ಪ್ರಾರಂಭ ಸ್ಥಳ: ಸಂಸೆ ಚೆಕ್‌ಪೋಸ್ಟ್

  • ಬೆಸ್ಟ್ ಸೀಸನ್: ಅಕ್ಟೋಬರ್ ರಿಂದ ಫೆಬ್ರವರಿ

ಸುರಕ್ಷತಾ ಸಲಹೆಗಳು

  • ಜಿಗಣೆಗಳಿಗೆ ತಯಾರಿ (salt / leech socks)

  • ಉತ್ತಮ ಗ್ರಿಪ್ ಇರುವ ಶೂಸ್

  • ಸಾಕಷ್ಟು ನೀರು ಮತ್ತು ಲಘು ಆಹಾರ

  • ಮಳೆಗಾಲದಲ್ಲಿ ಹೆಚ್ಚು ಎಚ್ಚರಿಕೆ

  • ಗೈಡ್ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು

ತೇಲಿ ತೇಲಿ ಹೋದೆ ನಾ!

ನನ್ನ ಅನುಭವ – ಒಂದು ಪ್ರಶ್ನೆ, ಒಂದು ಉತ್ತರ

ಈ ಪ್ರಯಾಣದ ನಂತರ ನನ್ನ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡಿತು- ನಾವು ಹುಡುಕುತ್ತಿರುವ ಸಂತೋಷ ನಿಜವಾಗಿ ಎಲ್ಲಿ ಇದೆ?

ಈ ಚಾರಣ ಅದಕ್ಕೆ ಉತ್ತರ ನೀಡಿತು- ಅದು ಹಣದಲ್ಲಿಲ್ಲ, ನಗರಗಳ ಗದ್ದಲದಲ್ಲಿಲ್ಲ; ಅದು ಪ್ರಕೃತಿಯ ಮಡಿಲಲ್ಲಿದೆ. ನೇತ್ರಾವತಿ ಶಿಖರ ಕೇವಲ ಒಂದು ಟ್ರೆಕ್ಕಿಂಗ್ ಸ್ಥಳವಲ್ಲ, ಅದು ಒಂದು ಅನುಭವ, ಒಂದು ಪಾಠ, ಒಂದು ಭಾವನೆ.

ಪ್ರಕೃತಿಯನ್ನು ಪ್ರೀತಿಸುವ ಪ್ರತಿಯೊಬ್ಬರೂ ಜೀವನದಲ್ಲಿ ಕನಿಷ್ಠ ಒಮ್ಮೆ ಈ ಸ್ಥಳವನ್ನು ಅನುಭವಿಸಲೇಬೇಕು.

ಇದನ್ನೂ ಓದಿ: ಕೊಡಗಿನ ಮಂದಲ್ ಪಟ್ಟಿ; ಪ್ರಕೃತಿಯ ಅದ್ಭುತ ತಾಣ

ಲೇಖನ: ಜೀವನ್ ಎಸ್. ಗೌಡ, ಹವ್ಯಾಸಿ ಬರಹಗಾರರು

ನವೀನ ಹಳೆಯದು