ಟಿಪ್ಪು ಬೇಸಿಗೆ ಅರಮನೆ: ತೇಗದ ಮರದಲ್ಲಿ ಮೂಡಿದ ಅದ್ಭುತ

tippu summer palace bangalore
ಬೇಸಿಗೆ ಅರಮನೆಯಲ್ಲಿ ದರ್ಬಾರ್ ನಡೆಸುತ್ತಿರುವ ಟಿಪ್ಪು ಸುಲ್ತಾನ್
ಸಿಲಿಕಾನ್ ಸಿಟಿ ಎಂದು ಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ, ರಾಜ ಮಹಾರಾಜರು ಹಾಗೂ ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾದ ಅನೇಕ ಐತಿಹಾಸಿಕ ಮತ್ತು ಪಾರಂಪರಿಕ ಕಟ್ಟಡಗಳು ಇಂದಿಗೂ ನಗರದ ವೈಭವವನ್ನು ಸಾರುತ್ತಿವೆ. ಆದರೆ ಅವುಗಳ ನಡುವೆ ವಿಶಿಷ್ಟ ಸ್ಥಾನ ಪಡೆದಿರುವ ಕಟ್ಟಡವೆಂದರೆ Tippu Sultan's Summer Palace.

ಬೆಂಗಳೂರು ನಗರದ ಹೃದಯಭಾಗದಲ್ಲಿ ಮೌನವಾಗಿ ನಿಂತಿರುವ ಈ ಅರಮನೆ ಕೇವಲ ಒಂದು ಕಟ್ಟಡವಲ್ಲ; ಅದು ಟಿಪ್ಪು ಸುಲ್ತಾನನ ವೈಭವ, ರಾಜಕೀಯ ತಂತ್ರ, ವಾಸ್ತುಶಿಲ್ಪದ ನೈಪುಣ್ಯ ಮತ್ತು ಕಾಲದ ಬದಲಾವಣೆಯ ಮೌನ ಸಾಕ್ಷಿಯಾಗಿದೆ.

ಅರಮನೆಯ ಸ್ಥಳ ಮತ್ತು ಪ್ರವೇಶ ಮಾಹಿತಿ

ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ ಬೆಂಗಳೂರಿನ ಕೆ.ಆರ್. ಮಾರ್ಕೆಟ್ ಮೆಟ್ರೋ ನಿಲ್ದಾಣದ ಸಮೀಪದಲ್ಲೇ ಇದೆ. ನಗರ ಮಧ್ಯದಲ್ಲಿರುವುದರಿಂದ ಪ್ರವಾಸಿಗರಿಗೆ ತಲುಪಲು ಸುಲಭವಾಗಿದೆ.

ಈ ಐತಿಹಾಸಿಕ ಸ್ಮಾರಕವನ್ನು ವೀಕ್ಷಿಸಲು ಪ್ರವೇಶ ಶುಲ್ಕ ಕೇವಲ 20 ರೂಪಾಯಿಯಾಗಿದ್ದು, ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯೂ ಲಭ್ಯವಿದೆ.

ಹೊರಗಿನಿಂದ ನೋಡಿದರೆ ಇದು ಸರಳ ಮಂಟಪದಂತೆಯೇ ಕಾಣಬಹುದು. ಆದರೆ ಒಳಗೆ ಕಾಲಿಟ್ಟ ಕ್ಷಣದಲ್ಲೇ ಇದರ ನಿಜವಾದ ವೈಭವ ನಿಧಾನವಾಗಿ ಅನಾವರಣಗೊಳ್ಳುತ್ತದೆ.

ಇದನ್ನೂ ಓದಿ: ಆಸಾರ್ ಮಹಲ್- ಬಿಜಾಪುರ ಆದಿಲ್ ಶಾಹಿ ಕಾಲದ ಸುಪ್ರೀಂ ಕೋರ್ಟ್!

tippu summer palace bangalore
ಬೆಂಗಳೂರು ಟಿಪ್ಪು ಬೇಸಿಗೆ ಅರಮನೆ

ವಾಸ್ತುಶಿಲ್ಪ ಮತ್ತು ಸೌಂದರ್ಯ

ಈ ಅರಮನೆ ಎರಡು ಅಂತಸ್ತಿನ ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪದ ಅದ್ಭುತ ಉದಾಹರಣೆ. ಕಂಬಗಳು, ಕಮಾನುಗಳು, ಬಾಲ್ಕನಿಗಳು ಮತ್ತು ಹೂವಿನ ವಿನ್ಯಾಸಗಳು- ಎಲ್ಲವೂ ಸೇರಿ ಆಗಿ ಅದ್ಭುತ ಕಲಾತ್ಮಕತೆಯನ್ನು ಸೃಷ್ಟಿಸುತ್ತವೆ.

ಫಾರ್ಸಿ ಭಾಷೆಯಲ್ಲಿ ಈ ಅರಮನೆಯನ್ನು 'ರಶ್-ಎ-ಜನ್ನತ್' ಎಂದು ಕರೆಯಲಾಗುತ್ತಿತ್ತು. ಇದರ ಅರ್ಥ 'ಸ್ವರ್ಗದ ವೈರಿ' ಅಂದರೆ ಸ್ವರ್ಗಕ್ಕಿಂತಲೂ ಸುಂದರವಾದ ಸ್ಥಳ ಎಂದು ಅರ್ಥೈಸಬಹುದು.

ಒಂದು ಕಾಲದಲ್ಲಿ ಈ ಅರಮನೆಯ ಗೋಡೆಗಳು ಕೆಂಪು, ಹಸಿರು ಮತ್ತು ಬಂಗಾರದ ನೈಸರ್ಗಿಕ ಬಣ್ಣಗಳಿಂದ ಅಲಂಕರಿಸಲ್ಪಟ್ಟಿದ್ದವು. ಇಂದಿಗೂ ಕೆಲವೆಡೆ ಬಂಗಾರದ ಲೇಪನದ ಗುರುತುಗಳು ಕಾಣುತ್ತವೆ. ಈ ಕಾರಣಕ್ಕೇ ಇದನ್ನು 'ಲಾಲ್ ಮಹಲ್' ಎಂದೂ ಕರೆಯಲಾಗುತ್ತದೆ.

ಬೆಂಗಳೂರು ಟಿಪ್ಪು ಬೇಸಿಗೆ ಅರಮನೆ

ನಿರ್ಮಾಣ ಇತಿಹಾಸ

ಈ ಅರಮನೆಯ ನಿರ್ಮಾಣ ಕಥೆ 18ನೇ ಶತಮಾನದಲ್ಲಿ ಆರಂಭವಾಗುತ್ತದೆ. 1781ರಲ್ಲಿ ಮೈಸೂರು ದೊರೆ ಹೈದರ್ ಅಲಿ ಇದರ ನಿರ್ಮಾಣಕ್ಕೆ ಚಾಲನೆ ನೀಡಿದರು. ನಂತರ 1791ರಲ್ಲಿ ಅವರ ಪುತ್ರ, 'ಮೈಸೂರು ಹುಲಿ' ಎಂದು ಪ್ರಸಿದ್ಧರಾದ ಟಿಪ್ಪು ಸುಲ್ತಾನ್ ಈ ಕಟ್ಟಡವನ್ನು ಪೂರ್ಣಗೊಳಿಸಿದರು.

ಟಿಪ್ಪು ಸುಲ್ತಾನದ ರಾಜಧಾನಿ ಶ್ರೀರಂಗಪಟ್ಟಣ ಆಗಿದ್ದರೂ, ಬೇಸಿಗೆಯಲ್ಲಿ 3 ರಿಂದ 4 ತಿಂಗಳು ಅವರು ಬೆಂಗಳೂರಿನಲ್ಲಿ ವಾಸವಿದ್ದು, ಇಲ್ಲಿಂದಲೇ ಆಡಳಿತ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು.

ಬೆಂಗಳೂರು ನಗರದ ತಂಪಾದ ಹವಾಮಾನ ಮತ್ತು ಹಸಿರು ವಾತಾವರಣ ಈ ಸ್ಥಳವನ್ನು ಬೇಸಿಗೆ ಆಡಳಿತ ಕೇಂದ್ರವನ್ನಾಗಿ ಮಾಡಿತು. ಇದರಿಂದಾಗಿ ಈ ಅರಮನೆ ವಿಶ್ರಾಂತಿಯ ಸ್ಥಳವಲ್ಲ, ಆಡಳಿತದ ಪ್ರಮುಖ ಕೇಂದ್ರವಾಗಿತ್ತು.

ಟಿಪ್ಪು ಸುಲ್ತಾನನ ಕಾಲದಲ್ಲಿ ಬ್ರಿಟಿಷರ ವಿರುದ್ಧ ಫ್ರೆಂಚರು ಬೆಂಬಲ ನೀಡುತ್ತಿದ್ದರು. ಈ ಹಿನ್ನೆಲೆಯಿಂದಾಗಿ ಈ ಅರಮನೆಯ ವಿನ್ಯಾಸದಲ್ಲಿ ಫ್ರೆಂಚ್ ವಾಸ್ತುಶಿಲ್ಪದ ಪ್ರಭಾವವೂ ಕಾಣುತ್ತದೆ. ಈ ಸಂಗತಿ ಟಿಪ್ಪು ಸುಲ್ತಾನನ ರಾಜಕೀಯ ತಂತ್ರ ಮತ್ತು ಆಂತರಾಷ್ಟ್ರೀಯ ಸಂಬಂಧಗಳನ್ನು ತೋರಿಸುತ್ತದೆ.

ಇದನ್ನೂ ಓದಿ: ಬಿಜಾಪುರ ಆದಿಲ್ ಶಾಹಿ ರಾಜರ ರೆಸಾರ್ಟ್ ಕುಮಟಗಿ ಬೇಸಿಗೆ ಅರಮನೆ

tippu summer palace bangalore
ಟಿಪ್ಪು ಬೇಸಿಗೆ ಅರಮನೆ ಬಾಲ್ಕನಿ

ನಿರ್ಮಾಣ ವೈಶಿಷ್ಟ್ಯಗಳು

ಈ ಅರಮನೆಯ ಅತ್ಯಂತ ವಿಶೇಷ ಅಂಶವೆಂದರೆ ಅದರ ನಿರ್ಮಾಣ ಶೈಲಿ. ಸುಮಾರು 90% ಕಟ್ಟಡವು ಸಾಗುವಾನಿ (teak wood) ಮರದಿಂದ ನಿರ್ಮಿಸಲ್ಪಟ್ಟಿದೆ. ಚಾವಣಿ, ಮೆಟ್ಟಿಲುಗಳು ಮತ್ತು ಬಾಲ್ಕನಿಗಳು- all wood construction. 

ಸಾಗುವಾನಿ ಮರವನ್ನು ಕಾವೇರಿ ನದಿಯಲ್ಲಿ ಸುಮಾರು ಒಂದು ವರ್ಷ ಇಟ್ಟು seasoning ಮಾಡಿದ ನಂತರ ಬಳಸಲಾಗಿದೆ ಎಂದು ಹೇಳಲಾಗುತ್ತದೆ. ಇದರಿಂದ ಕಟ್ಟಡಕ್ಕೆ ಬಲ, ದೀರ್ಘಾಯುಷ್ಯ ಮತ್ತು ತಾಪಮಾನ ನಿಯಂತ್ರಣ ಸಿಗುತ್ತದೆ. ಇದರಿಂದಲೇ ಬೇಸಿಗೆಯಲ್ಲಿಯೂ ಈ ಅರಮನೆಯ ಒಳಭಾಗ ತಂಪಾಗಿರುತ್ತದೆ.

ಸುಮಾರು 160ಕ್ಕೂ ಹೆಚ್ಚು ಬೃಹತ್ ಮರದ ಕಂಬಗಳು ಈ ಕಟ್ಟಡವನ್ನು ತಾಳಿ ನಿಲ್ಲಿಸುತ್ತವೆ. ಈ ಕಂಬಗಳ ಮೇಲ್ಭಾಗದಲ್ಲಿ ಕಮಲಾಕಾರದ ಅಲಂಕಾರಗಳು ಕಾಣುತ್ತವೆ.

tippu summer palace bangalore
ಅರಮನೆ ಮುಂದಿರುವ ಸೂಚನಾ ಫಲಕ

ಅರಮನೆಯ ಒಳ ವಿನ್ಯಾಸ

ಅರಮನೆಯ ಮಧ್ಯಭಾಗದಲ್ಲಿ ವಿಶಾಲವಾದ ದರ್ಬಾರ್ ಹಾಲ್ ಇದೆ. ವಾರಕ್ಕೆ ಎರಡು ಬಾರಿ ಇಲ್ಲಿ ಸಭೆಗಳು ನಡೆಯುತ್ತಿದ್ದು, ವಿಶೇಷವಾಗಿ ಶುಕ್ರವಾರ ನ್ಯಾಯ ತೀರ್ಪುಗಳನ್ನು ನೀಡಲಾಗುತ್ತಿತ್ತು.

ಜನರು ನೇರವಾಗಿ ರಾಜನನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಬಹುದಾಗಿತ್ತು. ಇದು ಆ ಕಾಲದ ಒಂದು ಸಾರ್ವಜನಿಕ ನ್ಯಾಯ ವ್ಯವಸ್ಥೆಯ ಉದಾಹರಣೆ. ಮೇಲ್ಮಹಡಿಯ ಬಾಲ್ಕನಿಗಳು ಖಾಸಗಿ ಮತ್ತು ರಾಜಕೀಯ ಸಭೆಗಳಿಗೆ ಬಳಸಲ್ಪಟ್ಟರೆ, ಕೆಳಭಾಗ ಸಾರ್ವಜನಿಕ ದರ್ಶನಗಳಿಗೆ ಬಳಸಲ್ಪಟ್ಟಿತ್ತು.

ಅರಮನೆಯ ನಾಲ್ಕು ಮೂಲೆಗಳಲ್ಲಿ 'ಜೆನಾನಾ ಕ್ವಾರ್ಟರ್ಸ್' ಇದ್ದು, ಇವು ರಾಜಕುಟುಂಬದ ಮಹಿಳೆಯರಿಗಾಗಿ ವಿನ್ಯಾಸಗೊಳಿಸಲ್ಪಟ್ಟಿದ್ದವು. ಟಿಪ್ಪುವಿನ ತಾಯಿ ಫಕ್ರುನ್ನಿಸಾ ಇಲ್ಲಿ ಕುಳಿತು ಸಭೆಗಳನ್ನು ವೀಕ್ಷಿಸುತ್ತಿದ್ದರೆಂದು ಹೇಳಲಾಗುತ್ತದೆ.

tippu summer palace bangalore
ಬೇಸಿಗೆ ಅರಮನೆಯ ಬೃಹತ್ ಕಂಬಗಳು

ಆಂಗ್ಲೋ-ಮೈಸೂರು ಯುದ್ಧ ಮತ್ತು ನಂತರದ ಕಾಲ

1799ರಲ್ಲಿ ನಡೆದ ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ್ ವೀರಗತಿ ಹೊಂದಿದರು. ಅದರ ನಂತರ ಈ ಅರಮನೆ ಬ್ರಿಟಿಷರ ಕೈಗೆ ಸೇರಿತು. ವಿಶೇಷ ಸಂಗತಿ ಎಂದರೆ, ಟಿಪ್ಪು ಸುಲ್ತಾನ್ ಈ ಅರಮನೆಯನ್ನು ಕೇವಲ 9 ವರ್ಷ ಬಳಸಿದರೆ, ಬ್ರಿಟಿಷರು ಅದನ್ನು ಸುಮಾರು 150 ವರ್ಷಗಳ ಕಾಲ ಬಳಸಿದರು.

1831ರಿಂದ 1868ರವರೆಗೆ ಬ್ರಿಟಿಷರು ಇದನ್ನು ತಮ್ಮ ಆಡಳಿತ ಕಚೇರಿಯಾಗಿ ಬಳಸಿದರು. ನಂತರ ಆಡಳಿತವನ್ನು ಅಠಾರ ಕಚೇರಿ (ಇಂದಿನ ಕರ್ನಾಟಕ ಹೈಕೋರ್ಟ್ ಕಟ್ಟಡ) ಕಡೆಗೆ ಸ್ಥಳಾಂತರಿಸಿದಾಗ, ಇದರ ರಾಜಕೀಯ ಮಹತ್ವ ಕಡಿಮೆಯಾಯಿತು. 1951ರಲ್ಲಿ ಭಾರತೀಯ ಪುರಾತತ್ವ ಇಲಾಖೆ ಇದನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಿತು.

ಕಲಾವಿದರು ಮತ್ತು ದಾಖಲೆಗಳು

ಈ ಅರಮನೆಯ ವೈಭವ ಯುರೋಪಿಯನ್ ಕಲಾವಿದರಾದ Robert Home ಮತ್ತು James Hunter ಅವರನ್ನು ಆಕರ್ಷಿಸಿತು. ಸುಮಾರು 200 ವರ್ಷಗಳ ಹಿಂದೆ ಇವರಿಂದ ರಚಿಸಲಾದ ಚಿತ್ರಗಳು ಈ ಅರಮನೆಯ ಮೂಲ ರೂಪ ಮತ್ತು ಆ ಕಾಲದ ಜೀವನಶೈಲಿಯನ್ನು ಅರ್ಥಮಾಡಿಕೊಳ್ಳಲು ಪ್ರಮುಖ ದಾಖಲೆಗಳಾಗಿವೆ.

tippu summer palace bangalore
ಬ್ರಿಟಿಷ್ ಕಲಾವಿದರ ಕುಂಚದಲ್ಲಿ ಮೂಡಿದ ಅರಮನೆ

ಧಾರ್ಮಿಕ ಸಹಿಷ್ಣುತೆ ಮತ್ತು ರಹಸ್ಯಗಳು

ಈ ಅರಮನೆಯ ಎದುರಲ್ಲೇ ವೆಂಕಟರಮಣಸ್ವಾಮಿ ದೇವಾಲಯ ಇದೆ. ಸುಮಾರು 400 ವರ್ಷಗಳ ಇತಿಹಾಸ ಹೊಂದಿರುವ ಈ ದೇವಾಲಯ, ಟಿಪ್ಪು ಸುಲ್ತಾನನ ಧರ್ಮ ಸಹಿಷ್ಣುತೆಯನ್ನು ಪ್ರತಿಬಿಂಬಿಸುತ್ತದೆ. 

ಇದೇ ವೇಳೆ, ಇಲ್ಲಿಂದ ಶ್ರೀರಂಗಪಟ್ಟಣವರೆಗೆ ರಹಸ್ಯ ಭೂಗರ್ಭ ಸುರಂಗ ಮಾರ್ಗವಿದ್ದಿತ್ತೆಂಬ ನಂಬಿಕೆಗಳೂ ಕೇಳಿಬರುತ್ತವೆ. ಆದರೆ ಇದಕ್ಕೆ ಸ್ಪಷ್ಟವಾದ ಐತಿಹಾಸಿಕ ದಾಖಲೆಗಳು ಲಭ್ಯವಿಲ್ಲ.

ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ ಕೇವಲ ಒಂದು ಕಟ್ಟಡವಲ್ಲ; ಇದು ಶೌರ್ಯ, ರಾಜಕೀಯ, ಕಲೆ, ವಿಜ್ಞಾನ ಮತ್ತು ಅಸಂಪೂರ್ಣ ಕನಸುಗಳ ಸಂಗಮವಾಗಿದೆ. 

ಬೆಂಗಳೂರು ನಗರದ ಮಧ್ಯದಲ್ಲಿ ನಿಂತಿರುವ ಈ ಮರದ ಮಹಾಕಾವ್ಯ, ನಮ್ಮ ಇತಿಹಾಸವನ್ನು ಮರೆಯದಂತೆ ಸದಾ ನೆನಪಿಸುತ್ತಲೇ ಇರುತ್ತದೆ. ನೀವು ಬೆಂಗಳೂರಿಗೆ ಭೇಟಿ ನೀಡುವಾಗ, ಈ ಅಪರೂಪದ ಐತಿಹಾಸಿಕ ಸ್ಮಾರಕವನ್ನು ತಪ್ಪದೇ ವೀಕ್ಷಿಸಿ.

ನವೀನ ಹಳೆಯದು