ನಾಡಹಬ್ಬ ದಸರಾ: ವಿಜಯನಗರದಿಂದ ಮೈಸೂರಿಗೆ ಬಂದಿದ್ದು ಹೀಗೆ..

ಹಂಪಿ ದಸರಾ ಮಹಾನವಮಿ ದಿಬ್ಬ
ಹಂಪಿಯ ಮಹಾನವಮಿ ದಿಬ್ಬದಲ್ಲಿ ನಡೆಯುತ್ತಿರುವ ನೃತ್ಯ (ಕಾಲ್ಪನಿಕ)
ಮೈಸೂರು ದಸರಾ ಅಂದರೆ ಇಂದು ನಮ್ಮ ಕಣ್ಣ ಮುಂದೆ ವಿದ್ಯುತ್ ದೀಪಗಳಿಂದ ಝಗಮಗಿಸುವ ಬೀದಿಗಳು, ಜಂಬೂ ಸವಾರಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಲಕ್ಷಾಂತರ ಜನರ ಸಂಭ್ರಮ ಮೂಡುತ್ತದೆ. ಆದರೆ ಈ ದಸರಾ ಹಬ್ಬ ಮೊದಲಿನಿಂದಲೂ ಇಂತಹ ಜನಪರ ಉತ್ಸವವಾಗಿರಲಿಲ್ಲ. ಒಂದು ಕಾಲದಲ್ಲಿ ಇದು ರಾಜಕೀಯ ಶಕ್ತಿ, ಸೇನಾ ಬಲ ಮತ್ತು ಸಾಮ್ರಾಜ್ಯದ ವೈಭವವನ್ನು ಪ್ರದರ್ಶಿಸುವ ಮಹೋತ್ಸವವಾಗಿತ್ತು.

ಇಂದು ಕರ್ನಾಟಕದ ನಾಡಹಬ್ಬವಾಗಿ ಗುರುತಿಸಿಕೊಂಡಿರುವ ದಸರಾ, ತನ್ನ ಮೂಲವನ್ನು ವಿಜಯನಗರ ಸಾಮ್ರಾಜ್ಯದ ರಾಜಕೀಯ ಸಂಪ್ರದಾಯಗಳಲ್ಲಿ ಹೊಂದಿದೆ ಎಂಬುದು ಅನೇಕ ಇತಿಹಾಸಕಾರರ ಅಭಿಮತ.

ವಿಜಯನಗರದಲ್ಲಿ ದಸರಾ: ರಾಜ್ಯೋತ್ಸವದ ರೂಪ

15ನೇ ಶತಮಾನ ದಕ್ಷಿಣ ಭಾರತದ ಇತಿಹಾಸದಲ್ಲಿ ಒಂದು ಮಹತ್ವದ ಸಂಕ್ರಮಣ ಕಾಲ. ಇದೇ ಅವಧಿಯಲ್ಲಿ ವಿಜಯನಗರ ಸಾಮ್ರಾಜ್ಯ ಮತ್ತು ಬಹಮನಿ ಸಾಮ್ರಾಜ್ಯಗಳು ಪ್ರಬಲವಾಗಿ ತಲೆ ಎತ್ತಿ ನಿಂತಿದ್ದವು. ಈ ಎರಡು ಮಹಾಶಕ್ತಿಗಳ ಮಧ್ಯೆ ರಾಜಕೀಯ ಮತ್ತು ಸೈನಿಕ ಸ್ಪರ್ಧೆ ತೀವ್ರವಾಗಿತ್ತು. ಬಹಮನಿ ರಾಜ್ಯ ಎದುರಿಸುವ ಸಲುವಾಗಿ ತಮ್ಮ ಸಾಮಂತರು, ಮಾಂಡಲೀಕರನ್ನು ಸದಾ ಒಗ್ಗೂಡಿ ಇರುವಂತೆ ನೋಡಿಕೊಳ್ಳುವ ಅನಿವಾರ್ಯತೆ ವಿಜಯನಗರಕ್ಕೆ ಉಂಟಾಯಿತು. ಇತಿಹಾಸದ ದಾಖಲೆಗಳ ಪ್ರಕಾರ, ವಿಜಯನಗರ ಸಾಮ್ರಾಜ್ಯದ ಸ್ಥಾಪಕರಾದ ಹರಿಹರ ಮತ್ತು ಬುಕ್ಕ ದಸರಾ ಹಬ್ಬವನ್ನು ರಾಜ್ಯೋತ್ಸವವಾಗಿ ಆಚರಿಸಿದ್ದರು. ಆದರೆ ದಸರಾ ಒಂದು ಭವ್ಯ ರಾಜಕೀಯ ಉತ್ಸವವಾಗಿ ರೂಪುಗೊಂಡದ್ದು ಕೃಷ್ಣದೇವರಾಯನ ಕಾಲದಲ್ಲಿ.

vijayanagara mysore dasara

ವಿಜಯನಗರದ ರಾಜಧಾನಿಯಾದ ಹಂಪಿಯಲ್ಲಿ ನಡೆಯುತ್ತಿದ್ದ ದಸರಾ ನೋಡಲು ದೇಶ–ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದರು. ಈ ಉತ್ಸವವು ಸಾಮ್ರಾಜ್ಯದ ಐಶ್ವರ್ಯ ಮತ್ತು ಸಂಘಟಿತ ಆಡಳಿತವನ್ನು ಪ್ರದರ್ಶಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿತ್ತು.

ಇದನ್ನೂ ಓದಿ: ರಾಮಲಿಂಗ ಡ್ಯಾಮ್ – ವಿಜಯಪುರದ ಮರೆತುಹೋದ ನೀರಾವರಿ ಅದ್ಭುತ

ಮಹಾನವಮಿ ದಿಬ್ಬ: ದಸರಾ ವೈಭವದ ವೇದಿಕೆ

ಹಂಪಿಯಲ್ಲಿರುವ ಮಹಾನವಮಿ ದಿಬ್ಬ ವಿಜಯನಗರ ಕಾಲದ ದಸರಾ ವೈಭವವನ್ನು ಇಂದಿಗೂ ಸ್ಮರಿಸುತ್ತದೆ. ಕೃಷ್ಣದೇವರಾಯ ಒಡಿಶಾದ ಮೇಲೆ ಜಯ ಸಾಧಿಸಿದ ನಂತರ ಈ ದಿಬ್ಬವನ್ನು ನಿರ್ಮಿಸಿದನೆಂದು ತಿಳಿದುಬರುತ್ತದೆ. ಮುಂದಿನ ದಿನಗಳಲ್ಲಿ ಇದೇ ದಿಬ್ಬದ ಮೇಲೆ ದಸರಾ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಅಶ್ವಯುಜ ಮಾಸದ ಪಾಡ್ಯಮಿಯಿಂದ ನವಮಿಯವರೆಗೆ ನಡೆಯುತ್ತಿದ್ದ ಈ ಉತ್ಸವದ ಉದ್ದೇಶ ಕೇವಲ ಧಾರ್ಮಿಕ ಆಚರಣೆ ಅಲ್ಲ. ವಿಜಯನಗರದ ಅಧೀನದಲ್ಲಿದ್ದ ಸಾಮಂತರು, ಮಾಂಡಲಿಕರು ಮತ್ತು ಆರ್ಥಿಕ ಸಹಾಯ ನೀಡುವವರನ್ನು ಒಂದೆಡೆ ಸೇರಿಸಿ ಕಪ್ಪ ಸಂಗ್ರಹಣೆ ನಡೆಸುವುದೂ ಇದರ ಭಾಗವಾಗಿತ್ತು.

vijayanagara hampi mysore dasara

ಜೊತೆಗೆ ವಿಜಯನಗರ ಅರಸರು ತಮ್ಮ ಅಧೀನದಲ್ಲಿದ್ದ ಪಾಳೆಯಗಾರರು, ಮಾಂಡಲಿಕರು ಮತ್ತು ಪ್ರಾದೇಶಿಕ ರಾಜರನ್ನು ಒಂದೇ ಮನೋಭಾವದಡಿ ಸೇರಿಸುವ ಅಗತ್ಯವನ್ನು ಅರಿತುಕೊಂಡಿದ್ದರು. ಬಹಮನಿ ಸೈನ್ಯದ ವಿರುದ್ಧ ಹೋರಾಡಲು ಸೈನಿಕ ಏಕತೆ ಮುಖ್ಯವಾಗಿತ್ತು.

ಇದರೊಂದಿಗೆ ಶೈವ ಮತ್ತು ವೈಷ್ಣವ ಧರ್ಮೀಯರನ್ನು ಒಗ್ಗೂಡಿಸಲು ದೇವಾಲಯ ನಿರ್ಮಾಣ, ಕವಿಗಳನ್ನು ಆಸ್ಥಾನದಲ್ಲಿ ಸೇರಿಸಿಕೊಳ್ಳುವುದು, ಮತ್ತು ದೈವ ಆರಾಧನೆಗೆ ಸಂಬಂಧಿಸಿದ ಭವ್ಯ ಉತ್ಸವಗಳನ್ನು ಆಯೋಜಿಸುವುದು ಪ್ರಮುಖ ತಂತ್ರವಾಗಿತ್ತು. ಈ ಹಿನ್ನೆಲೆಯಲ್ಲೇ ಹಂಪಿಯಲ್ಲಿ ಮಹಾನವಮಿ ಮತ್ತು ದಸರಾ ಉತ್ಸವಕ್ಕೆ ವಿಶೇಷ ಸ್ಥಾನ ಸಿಕ್ಕಿತು.

ಹಂಪಿ ಮಹಾನವಮಿ ದಿಬ್ಬ
ಹಂಪಿಯ ಮಹಾನವಮಿ ದಿಬ್ಬ

ದಸರಾ ಮತ್ತು ಯುದ್ಧತಂತ್ರ

ನವಮಿಯ ನಂತರವೇ ವಿಜಯನಗರದ ಅರಸರು ದಿಗ್ವಿಜಯಕ್ಕೆ ಹೊರಡುತ್ತಿದ್ದರು. ಮಳೆಯ ತೀವ್ರತೆ ಕಡಿಮೆಯಾಗುವ ಈ ಕಾಲವನ್ನು ಯುದ್ಧಕ್ಕೆ ಸೂಕ್ತವೆಂದು ಅವರು ಭಾವಿಸಿದ್ದರು. ಹೀಗಾಗಿ ಮಹಾನವಮಿ ಮತ್ತು ವಿಜಯದಶಮಿಯ ಆಚರಣೆಗಳು ಸೈನಿಕ ಹಾಗೂ ರಾಜಕೀಯ ಮಹತ್ವವನ್ನು ಹೊಂದಿದ್ದವು.

ದಶಮಿಯ ದಿನ ಅರಸನು ಮಹಾನವಮಿ ದಿಬ್ಬದ ಮೇಲೆ ಆಸೀನನಾಗಿ ಕಾಣಿಕೆಗಳನ್ನು ಸ್ವೀಕರಿಸುತ್ತಿದ್ದ. ಜೊತೆಗೆ ಅಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದ.

ರಾಜಕೀಯ ಶಕ್ತಿ ಮತ್ತು ಸಾಂಸ್ಕೃತಿಕ ಪ್ರದರ್ಶನ

ಮಹಾನವಮಿ ದಿಬ್ಬದ ಮೇಲೆ ಅಲಂಕೃತ ಕಂಬಗಳಿಂದ ನಿರ್ಮಿತವಾದ ಭವ್ಯ ವೇದಿಕೆ ಇದ್ದು, ಇಲ್ಲಿ ಧಾರ್ಮಿಕ ಪೂಜೆಗಳ ಜೊತೆಗೆ ಸಂಗೀತ, ನೃತ್ಯ ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಿದ್ದವು; ವಿಜಯನಗರದ ಅರಸರು ತಮ್ಮ ಶೌರ್ಯ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸಲು ಆನೆ ಮತ್ತು ಕುದುರೆಗಳ ಭವ್ಯ ಮೆರವಣಿಗೆ, ಕುಸ್ತಿ ಮತ್ತು ಮಲ್ಲಕಂಬ ಪ್ರದರ್ಶನಗಳು ಹಾಗೂ ಯುದ್ಧಕಲೆಗಳ ಪ್ರದರ್ಶನಗಳನ್ನು ಆಯೋಜಿಸುತ್ತಿದ್ದರು.

ಹಂಪಿ ದಸರಾ ಮಹಾನವಮಿ ದಿಬ್ಬ
ವಿಜಯನಗರ ಕಾಲದ ದಸರಾ (ಕಾಲ್ಪನಿಕ)

ಕೆತ್ತನೆಗಳಲ್ಲಿ ಉಳಿದ ದಸರಾ ದೃಶ್ಯಗಳು

ಸುಮಾರು 12 ಮೀಟರ್ ಎತ್ತರದ ಮಹಾನವಮಿ ದಿಬ್ಬದ ಸುತ್ತ ಸೈನಿಕರು, ಆನೆ–ಕುದುರೆಗಳು, ಸಂಗೀತಗಾರರು, ನೃತ್ಯಗಾರರು ಮತ್ತು ವಿದೇಶಿ ರಾಯಭಾರಿಗಳ ಕೆತ್ತನೆಗಳು ಕಂಡುಬರುತ್ತವೆ. ರಾಜರ ಮೆರವಣಿಗೆ, ಸಂಗೀತ ಕಾರ್ಯಕ್ರಮ, ಜಂಬೂ ಸವಾರಿ, ಬೇಟೆ ಮತ್ತು ದೈನಂದಿನ ಜೀವನದ ದೃಶ್ಯಗಳು ಈ ದಿಬ್ಬದಲ್ಲಿ ಕೆತ್ತಲ್ಪಟ್ಟಿವೆ.

ಇವು ವಿಜಯನಗರ ಕಾಲದ ದಸರಾ ಉತ್ಸವದ ದೃಶ್ಯಾತ್ಮಕ ದಾಖಲೆಗಳಾಗಿವೆ.

ಇದನ್ನೂ ಓದಿ: ವಿಜಯನಗರ ಸಾಮ್ರಾಜ್ಯದ ಪತನಕ್ಕೆ ಕಾರಣ ಈ ದೈತ್ಯ ಫಿರಂಗಿ!

ವಿದೇಶಿ ಪ್ರವಾಸಿಗರ ಕಣ್ಣಿನಲ್ಲಿ ಹಂಪಿ ದಸರಾ

1420ರಿಂದ 1520ರವರೆಗೆ ಹಂಪಿಗೆ ಬಂದ ಹಲವಾರು ವಿದೇಶಿ ಪ್ರವಾಸಿಗರು ಮಹಾನವಮಿ ಉತ್ಸವವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ. ಅವರಲ್ಲಿ ಇಟಲಿಯ ನಿಕೋಲೋ ದೆ ಕೊಂಟಿ, ಪರ್ಷಿಯಾದ ಅಬ್ದುರ್ ರಜಾಕ್ ಮತ್ತು ಪೋರ್ಚುಗೀಸ್ ಪ್ರವಾಸಿಗ ಡೊಮಿಂಗೊ ಪೇಸ್ ಪ್ರಮುಖರು. ಇವರೆಲ್ಲರೂ ಹಂಪಿಯ ಮಹಾನವಮಿ ದಿಬ್ಬದ ಸುತ್ತ ನಡೆಯುತ್ತಿದ್ದ ಸೈನಿಕ ಮೆರವಣಿಗೆಗಳು, ಅಲಂಕೃತ ಆನೆ-ಕುದುರೆಗಳು, ಪಾಳೆಯಗಾರರ ಸಮಾಗಮ ಮತ್ತು ರಾಜಮರ್ಯಾದೆಯನ್ನು ವಿಶೇಷವಾಗಿ ದಾಖಲಿಸಿದ್ದಾರೆ.
vijayanagara mysore dasara

ಅಬ್ದುರ್ ರಜಾಕ್‌ನ ವರ್ಣನೆ

1442-43ರಲ್ಲಿ ಹಂಪಿಗೆ ಬಂದ ಅಬ್ದುರ್ ರಜಾಕ್ ಮಹಾನವಮಿ ಉತ್ಸವವನ್ನು ಅತ್ಯಂತ ವೈಭವಶಾಲಿಯಾಗಿ ವಿವರಿಸುತ್ತಾನೆ.
ರಾಜನ ಆಯ್ಕೆಯ ಮೇರೆಗೆ ಸಾಮ್ರಾಜ್ಯದ ವಿವಿಧ ಭಾಗಗಳ ಪ್ರಮುಖರು ರಾಜಮನೆತನಕ್ಕೆ ಆಗಮಿಸುತ್ತಿದ್ದರು. ಅಲಂಕರಿಸಿದ ಆನೆಗಳು, ಯುದ್ಧ ಕವಚಗಳು, ಶಸ್ತ್ರಾಸ್ತ್ರಗಳು ಮತ್ತು ಸೈನಿಕ ಪ್ರದರ್ಶನಗಳು ಉತ್ಸವದ ಅಂಗವಾಗಿದ್ದವು.
ಅವನ ಮಾತಿನಲ್ಲಿ, ಅಸಂಖ್ಯಾತ ಆನೆಗಳು ಸೇರಿದ್ದಾಗ ಅವು ಸಮುದ್ರದ ಅಲೆಗಳಂತೆ ಕಾಣಿಸುತ್ತಿದ್ದವು. ಈ ವರ್ಣನೆ ವಿಜಯನಗರದ ವೈಭವವನ್ನು ಸ್ಪಷ್ಟಪಡಿಸುತ್ತದೆ.

ಡೊಮಿಂಗೊ ಪೇಸ್ ಹೇಳುವ ನವರಾತ್ರಿ ಸಂಭ್ರಮ

ಡೊಮಿಂಗೊ ಪೇಸ್ ನೀಡುವ ವಿವರಣೆ ಇನ್ನೂ ವಿಶಿಷ್ಟವಾಗಿದೆ. ಅವನ ಪ್ರಕಾರ, ಹಬ್ಬದಲ್ಲಿ ಭಾಗವಹಿಸಲು ರಾಜ್ಯದ ಎಲ್ಲ ದಂಡನಾಯಕರು, ಮಾಂಡಲಿಕರು, ಮಹಾಮಂಡಲೇಶ್ವರರು ಮತ್ತು ದೇವದಾಸಿಯರನ್ನು ಕರೆಸಲಾಗುತ್ತಿತ್ತು.
ಹಬ್ಬದ ಆರಂಭದಲ್ಲಿ ರಾಜನು ವಿಜಯಭವನದ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುತ್ತಿದ್ದನು. ನಂತರ ಅಲಂಕೃತ ಕುದುರೆಗಳು ಮತ್ತು ಆನೆಗಳಿಗೆ ಪೂಜೆ ನಡೆಯುತ್ತಿತ್ತು. ಆಮೇಲೆ ರಾಜನು ತನ್ನ ಆಸನದಲ್ಲಿ ಕುಳಿತು ಪ್ರಮುಖರ ವಂದನೆಗಳನ್ನು ಸ್ವೀಕರಿಸುತ್ತಿದ್ದನು. ನರ್ತಕಿಯರ ನೃತ್ಯ, ಆಭರಣಗಳ ವೈಭವ, ರಾಜಮರ್ಯಾದೆಯ ವಿಧಿವಿಧಾನಗಳು — ಇವೆಲ್ಲವೂ ಉತ್ಸವದ ಭಾಗವಾಗಿದ್ದವು.
vijayanagara mysore dasara

ಸೈನಿಕ ಪ್ರದರ್ಶನ ಮತ್ತು ಕಾಳಗ

ಉತ್ಸವದ ಪ್ರಮುಖ ಹಂತಗಳಲ್ಲಿ ಸೈನ್ಯದ ಪರಿಶೀಲನೆ ಒಂದು ಮುಖ್ಯ ಅಂಶವಾಗಿತ್ತು. ಜಟ್ಟಿಗಳ ಕುಸ್ತಿ, ಕುದುರೆಗಳ ಪ್ರದರ್ಶನ, ಆನೆಗಳ ಮೆರವಣಿಗೆ, ಮತ್ತು ಶಸ್ತ್ರಾಸ್ತ್ರ ಪ್ರದರ್ಶನಗಳು ನಡೆಯುತ್ತಿದ್ದವು.
ರಾಜನು ಸ್ವತಃ ಕುದುರೆಯ ಮೇಲೆ ಕುಳಿತು ಸೈನ್ಯವನ್ನು ವೀಕ್ಷಿಸುತ್ತಿದ್ದನು. ಶಸ್ತ್ರಾಸ್ತ್ರಗಳ ಧ್ವನಿ, ಸೈನಿಕರ ಘೋಷಣೆಗಳು, ಆನೆ-ಕುದುರೆಗಳ ಸದ್ದಿನಿಂದ ವಾತಾವರಣ ಗಂಭೀರವಾಗುತ್ತಿತ್ತು.
ಈ ಉತ್ಸವವು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ — ಅದು ರಾಜಶಕ್ತಿಯ ಪ್ರದರ್ಶನವಾಗಿತ್ತು.

ಫೆರ್ನಾಲ್ ನ್ಯೂನಿಜ್ ದಾಖಲಿಸಿದ ವೈಭವ

ಪೋರ್ಚುಗೀಸ್ ಪ್ರವಾಸಿಗ ಫೆರ್ನಾಲ್ ನ್ಯೂನಿಜ್ ಕೂಡ ಮಹಾನವಮಿ ಉತ್ಸವದ ವೈಭವವನ್ನು ದಾಖಲಿಸಿದ್ದಾನೆ.
ಅವನ ಪ್ರಕಾರ, ಅಲಂಕೃತ ಆನೆ-ಕುದುರೆಗಳು, ಅಮೂಲ್ಯ ರತ್ನಗಳಿಂದ ಸಿಂಗರಿಸಲಾದ ರಾಜವಸ್ತ್ರಗಳು ಮತ್ತು ಸಾವಿರಾರು ಜಟ್ಟಿಗಳ ಸಮಾಗಮ ಉತ್ಸವವನ್ನು ಅದ್ದೂರಿಯನ್ನಾಗಿಸುತ್ತಿದ್ದವು. ಇವೆಲ್ಲವೂ ವಿಜಯನಗರ ಸಾಮ್ರಾಜ್ಯದ ಆರ್ಥಿಕ ಮತ್ತು ಸೈನಿಕ ಬಲವನ್ನು ಪ್ರದರ್ಶಿಸುವ ಕಾರ್ಯಕ್ರಮವಾಗಿತ್ತು.
ಹಂಪಿ ದಸರಾ ಮಹಾನವಮಿ ದಿಬ್ಬ
ವಿಜಯನಗರ ಕಾಲದ ದಸರಾ (ಕಾಲ್ಪನಿಕ)

ವಿಜಯನಗರ ಪತನ ಮತ್ತು ಮೈಸೂರು ದಸರಾ

1565ರ ತಾಳಿಕೋಟೆ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯ ಪತನವಾಯಿತು. ಆದರೆ ದಸರಾ ಸಂಪ್ರದಾಯ ನಿಂತಿಲ್ಲ. ವಿಜಯನಗರದ ಸಾಮಂತರು ಮತ್ತು ಮಾಂಡಲಿಕರು ಇದನ್ನು ಮುಂದುವರಿಸಿದರು.

ಇತಿಹಾಸದ ಪ್ರಕಾರ, ಮೈಸೂರಿನ ಯದುವಂಶದ ದೊರೆ ರಾಜಾ ಒಡೆಯರ್ 1610ರಲ್ಲಿ ವಿಜಯದಶಮಿಯ ಮೆರವಣಿಗೆಯನ್ನು ಪುನಾರಂಭಿಸಿದರು. ಚಾಮುಂಡೇಶ್ವರಿ ದೇವಿಗೆ ಪೂಜೆ, ನವರಾತ್ರಿ ಉತ್ಸವ ಮತ್ತು ಜಂಬೂ ಸವಾರಿ ಮೈಸೂರು ದಸರಾದ ಮುಖ್ಯ ಅಂಶಗಳಾಗಿ ರೂಪುಗೊಂಡವು.  ವಿಜಯನಗರದಲ್ಲಿ ಉತ್ಸವವು ಮುಖ್ಯವಾಗಿ ಅರಮನೆಯ ವಲಯಕ್ಕೆ ಸೀಮಿತವಾಗಿತ್ತು. ಸಾಮಾನ್ಯ ಜನರಿಗೆ ನೇರ ಪ್ರವೇಶ ಸಿಗುತ್ತಿರಲಿಲ್ಲ ಎಂದು ಅನೇಕ ಪ್ರವಾಸಿಗರು ದಾಖಲಿಸಿದ್ದಾರೆ.

Mysore dasara

ಆದರೆ ಮೈಸೂರು ದಸರಾ ವಿಭಿನ್ನವಾಗಿತ್ತು. ಅರಮನೆಯಿಂದ ಬನ್ನಿಮಂಟಪದವರೆಗೆ ನಡೆಯುವ ಜಂಬೂಸವಾರಿ ಮೆರವಣಿಗೆಯನ್ನು ಜನರಿಗೆ ಕಣ್ಣಾರೆ ನೋಡುವ ಅವಕಾಶ ನೀಡಲಾಯಿತು. ಇದರಿಂದ ದಸರಾ ಜನಪರ ಸ್ವರೂಪ ಪಡೆದುಕೊಂಡಿತು.

ಇಂದು ನಾವು ಕಾಣುವ ಮೈಸೂರು ದಸರಾ ಕೇವಲ ಹಬ್ಬವಲ್ಲ. ಅದು ವಿಜಯನಗರದ ರಾಜಕೀಯ ಸಂಪ್ರದಾಯ, ಸೈನಿಕ ತಂತ್ರ ಮತ್ತು ಸಾಂಸ್ಕೃತಿಕ ಪರಂಪರೆಯ ಜೀವಂತ ಪರಂಪರೆ. ಶತಮಾನಗಳ ಕಾಲ ರಾಜಪ್ರಭುತ್ವ ಬದಲಾದರೂ, ದಸರಾ ತನ್ನ ಅರ್ಥವನ್ನು ಬದಲಿಸಿಕೊಂಡು ನಾಡಹಬ್ಬವಾಗಿ ಉಳಿದಿದೆ.

ನವೀನ ಹಳೆಯದು