'ಕರ್ನಾಟಕದ ರಾಬಿನ್ ಹುಡ್' ವೀರ ಸಿಂಧೂರ ಲಕ್ಷ್ಮಣ: ಮರೆತುಹೋದ ಸ್ವಾತಂತ್ರ್ಯ ಹೋರಾಟಗಾರ
byನಾಡ ಸಂಚಾರಿ-
ವೀರ ಸಿಂಧೂರ ಲಕ್ಷ್ಮಣ (ಕಾಲ್ಪನಿಕ ಚಿತ್ರ)
ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ಗಮನಿಸಿದರೆ, ಸಾವಿರಾರು ಕ್ರಾಂತಿಕಾರಿಗಳ ರಕ್ತಸಿಕ್ತ ಹೋರಾಟಗಳು ನಮ್ಮ ಕಣ್ಣೆದುರು ಜೀವಂತವಾಗಿ ಮೂಡುತ್ತವೆ. ಸಂಗೊಳ್ಳಿ ರಾಯಣ್ಣ, ಮೈಲಾರ ಮಹಾದೇವಪ್ಪ, ಸುರಪುರ ವೆಂಕಟಪ್ಪ ನಾಯಕ, ಭಗತ್ ಸಿಂಗ್, ಚಂದ್ರಶೇಖರ ಆಜಾದ್ ಮೊದಲಾದ ಅನೇಕ ವೀರರು ತಮ್ಮ ಯುವ ವಯಸ್ಸಿನಲ್ಲೇ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದರು. ಇಂತಹ ಮಹನೀಯರ ಪವಿತ್ರ ಸಾಲಿನಲ್ಲಿ ಮತ್ತೊಂದು ಹೆಸರಾಗಿ ಹೊಳೆಯುವವರು ವೀರ ಸಿಂಧೂರ ಲಕ್ಷ್ಮಣ.
ವೀರ ಸಿಂಧೂರ ಲಕ್ಷ್ಮಣನ ಸಮಾಧಿ
ಇಂದಿಗೆ ಸುಮಾರು 103 ವರ್ಷಗಳ ಹಿಂದೆ, ಬೀಳಗಿ ಸಮೀಪದ ಕಪ್ಪರ ಪಡಿಯಮ್ಮನ ಗುಡ್ಡದಲ್ಲಿ ಬ್ರಿಟಿಷರು ಸಿಂಧೂರ ಲಕ್ಷ್ಮಣನನ್ನು ಗುಂಡಿಕ್ಕಿ ಕೊಂದರು. ಆಗ ಅವನಿಗೆ ಕೇವಲ 24 ವರ್ಷ ವಯಸ್ಸು. ಬ್ರಿಟಿಷ್ ಆಡಳಿತ ಮತ್ತು ಜಮೀನ್ದಾರರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಲಕ್ಷ್ಮಣನ ಸಾವು ಈ ಭಾಗದ ಬಡವರು ಮತ್ತು ಶೋಷಿತರನ್ನು ತೀವ್ರ ದುಃಖಕ್ಕೆ ತಳ್ಳಿತು. ಶ್ರೀಮಂತರಿಂದ ಸಂಪತ್ತನ್ನು ಪಡೆದು ಅದನ್ನು ಬಡವರಿಗೆ ಹಂಚುತ್ತಿದ್ದ ಕಾರಣದಿಂದ ಅವನನ್ನು 'ಕರ್ನಾಟಕದ ರಾಬಿನ್ ಹುಡ್' ಎಂದೂ ಕರೆಯಲಾಗುತ್ತಿತ್ತು. ಇತಿಹಾಸದ ಅಧಿಕೃತ ಪುಟಗಳು ಅವನ ಹೆಸರನ್ನು ಹೆಚ್ಚು ನೆನಪಿಸದಿದ್ದರೂ, ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಭಾಗದ ಜನರು ಅವನನ್ನು ಮರೆಯಲೇ ಇಲ್ಲ. ಅವನ ಸಾಹಸಗಳನ್ನು ಜನರು ಲಾವಣಿಗಳಲ್ಲಿ, ಜಾನಪದ ಹಾಡುಗಳಲ್ಲಿ ಮತ್ತು ನಾಟಕಗಳಲ್ಲಿ ಇಂದಿಗೂ ಹಾಡುತ್ತಲೇ ಇದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲ್ಲೂಕಿನ ಸಿಂಧೂರ ಎಂಬ ಸಣ್ಣ ಹಳ್ಳಿಯಲ್ಲಿ ಲಕ್ಷ್ಮಣ ಜನಿಸಿದರು. ಈ ಹಳ್ಳಿಯಲ್ಲಿ ಕನ್ನಡ ಮಾತನಾಡುವ ಜನರೇ ಹೆಚ್ಚು. ಜಮೀನ್ದಾರ ಭೀಮನಗೌಡನ ಬಳಿ ವಾಲಿಕಾರನಾಗಿ ಕೆಲಸ ಮಾಡುತ್ತಿದ್ದ ಸಾಬಣ್ಣ ಮತ್ತು ನರಸವ್ವ ದಂಪತಿಗೆ ಜನಿಸಿದ ಮಗನೇ ಈ ವೀರ ಲಕ್ಷ್ಮಣ. ಬೇಡರ ಸಮುದಾಯಕ್ಕೆ ಸೇರಿದ ಲಕ್ಷ್ಮಣ ಬಾಲ್ಯದಿಂದಲೇ ಧೈರ್ಯ ಮತ್ತು ಸಾಹಸಕ್ಕೆ ಹೆಸರುವಾಸಿಯಾಗಿದ್ದನು ಎಂದು ಜನಪದಗಳು ವರ್ಣಿಸುತ್ತವೆ. ಸುಮಾರು ಏಳು ಅಡಿ ಎತ್ತರದ ಆಜಾನುಬಾಹು ವ್ಯಕ್ತಿಯಾಗಿದ್ದ ಅವನು ಅನ್ಯಾಯ ಕಂಡಾಗ ತಕ್ಷಣ ಸಿಡಿದೇಳುವ ಸ್ವಭಾವ ಹೊಂದಿದ್ದ.
ತನ್ನ ತಂದೆ ತಾಯಿ ಜೊತೆ ಬಾಲಕ ಲಕ್ಷ್ಮಣ (ಕಾಲ್ಪನಿಕ ಚಿತ್ರ)
ಹದಿನೆಂಟರ ಹರೆಯದಲ್ಲಿ ಅವನಿಗೆ ತನ್ನ ಅಕ್ಕನ ಮಗಳು ಚಂದ್ರವ್ವಳೊಂದಿಗೆ ವಿವಾಹ ನಡೆಯಿತು. ತಂದೆಯ ಮರಣದ ನಂತರ ವಾಲಿಕಾರನ ಕೆಲಸವೂ ಲಕ್ಷ್ಮಣನ ಪಾಲಿಗೆ ಬಂತು. ಸರ್ಕಾರ ನೀಡಿದ್ದ ತುಂಡು ಭೂಮಿಯಲ್ಲಿ ತಾಯಿ ಮತ್ತು ಹೆಂಡತಿಯೊಂದಿಗೆ ಕೃಷಿ ಮಾಡಿಕೊಂಡು ಸಾಮಾನ್ಯ ಬದುಕು ಸಾಗಿಸುತ್ತಿದ್ದನು. ಆದರೆ ಆ ಕಾಲದಲ್ಲಿ ಬಂದ ಭೀಕರ ಬರಗಾಲ ಅವನ ಜೀವನವನ್ನು ಸಂಪೂರ್ಣವಾಗಿ ಬದಲಿಸಿತು.
ಬೀಳಗಿಯಲ್ಲಿರುವ ಸಿಂಧೂರ ಲಕ್ಷ್ಮಣ ಕಟ್ಟಿ
ಒಂದು ವರ್ಷ ಮಳೆ ಬರದೆ ಬೆಳೆಗಳು ನಾಶವಾದವು. ಕೆರೆಗಳು ಮತ್ತು ಬಾವಿಗಳು ಬತ್ತಿ ಜನರು ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಕೂಲಿ ಸಿಗದೆ, ಊಟ ಸಿಗದೆ ಜನರು ಉಪವಾಸದ ಪರಿಸ್ಥಿತಿಗೆ ತಲುಪಿದರು. ಇಂತಹ ಸಂಕಷ್ಟದ ವೇಳೆಯಲ್ಲಿಯೂ ಜತ್ ಸಂಸ್ಥಾನ ಮತ್ತು ಬ್ರಿಟಿಷ್ ಆಡಳಿತ ಜನರಿಂದ ಕಂದಾಯವನ್ನು ಕಠಿಣವಾಗಿ ವಸೂಲಿ ಮಾಡುತ್ತಿತ್ತು. ತೆರಿಗೆ ಕಟ್ಟಲು ಸಾಧ್ಯವಾಗದ ರೈತರ ಮನೆ, ಭೂಮಿಗಳನ್ನು ಜಪ್ತಿ ಮಾಡಲಾಗುತ್ತಿತ್ತು. ಅಸಹಾಯಕ ಜನರ ಆಸ್ತಿ ಮತ್ತು ಒಡವೆಗಳು ಶ್ರೀಮಂತರ ಪಾಲಾಗುತ್ತಿದವು. ಊರಿನ ಗೌಡರು ಮತ್ತು ಕುಲಕರಣಿಗಳು ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದರು.
ಜೈಲಿನಿಂದ ತಪ್ಪಿಸಿಕೊಳ್ಳುತ್ತಿರುವ ಲಕ್ಷ್ಮಣ ಮತ್ತು ಸಂಗಡಿಗರು (ಕಾಲ್ಪನಿಕ)
ತನ್ನ ಜನರ ಈ ದುಸ್ಥಿತಿಯನ್ನು ಕಂಡ ಲಕ್ಷ್ಮಣ ಮನಸ್ಸಿನಲ್ಲಿ ಬಂಡಾಯದ ಕಿಡಿ ಹೊತ್ತಿತು. ಇದೇ ಸಮಯದಲ್ಲಿ ಮಹಾತ್ಮ ಗಾಂಧಿ ಬ್ರಿಟಿಷರ ವಿರುದ್ಧ ಅಸಹಕಾರ ಚಳವಳಿಗೆ ಕರೆ ನೀಡಿದ್ದರು. ಈ ಚಳವಳಿಯ ಪ್ರಭಾವವೂ ಲಕ್ಷ್ಮಣನ ಮೇಲೆ ಬಿತ್ತು. ಊರಿನಲ್ಲಿ ವಾಲಿಕಾರನಾಗಿದ್ದ ಅವನು ಮನೆ ಮನೆಗೆ ತೆರಳಿ “ಕಂದಾಯ ಕಟ್ಟಬೇಡಿ, ಅನ್ಯಾಯದ ವಿರುದ್ಧ ನಿಲ್ಲಿ” ಎಂದು ಜನರಿಗೆ ಕರೆ ನೀಡಲು ಆರಂಭಿಸಿದ.
ಸಿಂಧೂರ ಲಕ್ಷ್ಮಣ ಮತ್ತು ಸಂಗಡಿಗರು (ಕಾಲ್ಪನಿಕ ಚಿತ್ರ)
ಇದರಿಂದ ಅವನು ಜಮೀನ್ದಾರರ ಕೆಂಗಣ್ಣಿಗೆ ಗುರಿಯಾದ. ಇದೇ ಸಂದರ್ಭದಲ್ಲಿ ನಡೆದ ಒಂದು ಘಟನೆ ಅವನ ಬದುಕಿಗೆ ತಿರುವು ನೀಡಿತು. ಒಂದು ಮಧ್ಯರಾತ್ರಿ ಲಕ್ಷ್ಮಣನ ಮನೆಗೆ ಅವನ ಸೋದರಳಿಯರಾದ ನರಸಪ್ಪ, ಸಾಬು ಮತ್ತು ಗೋಪಾಲ ಬಂದರು. ಬರಗಾಲದಿಂದ ಕಂಗೆಟ್ಟಿದ್ದ ಅವರು ಖಾನಾಪುರದ ಸಾಹುಕಾರನ ಮನೆ ದಾಳಿ ಮಾಡಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಆಶ್ರಯಕ್ಕಾಗಿ ಬಂದಿದ್ದರು. ಆರಂಭದಲ್ಲಿ ಲಕ್ಷ್ಮಣ ಅವರನ್ನು ಹೊರಹಾಕಿದ. ಆದರೆ ಅವನ ಪತ್ನಿ ಚಂದ್ರವ್ವ ಬಡವರ ಸಂಕಷ್ಟವನ್ನು ಉಲ್ಲೇಖಿಸಿ ಶ್ರೀಮಂತರ ಅನ್ಯಾಯದ ವಿರುದ್ಧ ನಿಲ್ಲಬೇಕೆಂದು ಹೇಳಿದಳು. ಆ ಮಾತುಗಳು ಲಕ್ಷ್ಮಣನ ಮನಸ್ಸಿನಲ್ಲಿ ಆಳವಾದ ಚಿಂತನೆ ಹುಟ್ಟಿಸಿತು.
ಆಸ್ತಿ ಪತ್ರಗಳನ್ನು ಬಡವರಿಗೆ ಮರಳಿಸುತ್ತಿರುವ ಲಕ್ಷ್ಮಣ (ಕಾಲ್ಪನಿಕ ಚಿತ್ರ)
ಆ ರಾತ್ರಿ ಯಿಡೀ ಅವನು ನಿದ್ರೆ ಮಾಡಲಿಲ್ಲ. ಕೊನೆಗೆ ಬೆಳಗಾಗುವಷ್ಟರಲ್ಲಿ ಶ್ರೀಮಂತರ ಸಂಪತ್ತನ್ನು ಪಡೆದು ಬಡವರಿಗೆ ಸಹಾಯ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದನು. ತನ್ನ ಅಳಿಯರನ್ನು ಸೇರಿಸಿಕೊಂಡು ಒಂದು ತಂಡವನ್ನು ರಚಿಸಿದನು. ಮೊದಲಿಗೆ ಬೀಳೂರಿನ ಕುಲಕರ್ಣಿಯ ಅಂಗಡಿಗೆ ದಾಳಿ ನಡೆಸಿ ಅಲ್ಲಿನ ವಸ್ತುಗಳನ್ನು ಬಡವರಿಗೆ ಹಂಚಿದನು. ಜನರು ಅಡವಿಟ್ಟಿದ್ದ ಹೊಲ ಮತ್ತು ಮನೆ ಪತ್ರಗಳನ್ನು ನಾಶಮಾಡಿ ಅವರಿಗೆ ನ್ಯಾಯ ಒದಗಿಸಿದನು.
ಬೀಳಗಿ ಹತ್ತಿರದಲ್ಲಿರುವ ಕಪ್ಪರ ಪಡಿಯಮ್ಮನ ಗುಡ್ಡ
ಇಲ್ಲಿಂದ ಆರಂಭವಾದ ಲಕ್ಷ್ಮಣನ ಸಾಹಸಗಳು ನಿಧಾನವಾಗಿ ದೊಡ್ಡ ಚಳವಳಿಯಾಗಿ ರೂಪುಗೊಂಡವು. ಅವನ ತಂಡ ಊರು ಊರು ಸಂಚರಿಸಿ ಶ್ರೀಮಂತರ ಮನೆಗಳ ಮೇಲೆ ದಾಳಿ ನಡೆಸುತ್ತಿತ್ತು. ಬಡವರ ಹೊಲ, ಮನೆಗಳನ್ನು ಮರಳಿ ಕೊಡಿಸುತ್ತಿತ್ತು. ಜನರು ಅವನಿಗೆ ಅನ್ನ, ಆಶ್ರಯ ಮತ್ತು ಮಾಹಿತಿ ನೀಡಿ ಸಹಾಯ ಮಾಡುತ್ತಿದ್ದರು. ಲಕ್ಷ್ಮಣನ ಹೆಸರು ಕೇಳಿದರೆ ಜನರಲ್ಲಿ ಧೈರ್ಯ ಮೂಡುತ್ತಿತ್ತು.
ಲಕ್ಷ್ಮಣ ಬಂಧನಕ್ಕೆ ಆದೇಶ ಹೊರಡಿಸಿದ ಬ್ರಿಟಿಷ್ ಅಧಿಕಾರಿ (ಕಾಲ್ಪನಿಕ)
ಈ ಘಟನೆಗಳಿಂದ ಜಮೀನ್ದಾರರು ಭಯಗೊಂಡರು. ಲಕ್ಷ್ಮಣನನ್ನು ಹಿಡಿಯಲು ಬ್ರಿಟಿಷ್ ಅಧಿಕಾರಿಗಳು ಶೋಧ ಆರಂಭಿಸಿದರು. ಅಥಣಿ, ಜಮಖಂಡಿ, ಬಬಲೇಶ್ವರ, ಕಂಕಣವಾಡಿ ಮುಂತಾದ ಪ್ರದೇಶಗಳಲ್ಲಿ ಪೊಲೀಸರು ಹುಡುಕಾಟ ನಡೆಸಿದರು. ಆದರೆ ಲಕ್ಷ್ಮಣನ ತಂಡ ಅವರನ್ನು ತಪ್ಪಿಸಿಕೊಂಡೇ ಇತ್ತು.
ಗುಡ್ಡ ಗಾಡುಗಳಲ್ಲಿ ಅಡಗಿ ಕುಳಿತ ಲಕ್ಷ್ಮಣ ಮತ್ತು ಸಂಗಡಿಗರು (ಕಾಲ್ಪನಿಕ)
ಒಂದು ವೇಳೆ ಅವನು ತನ್ನ ತಾಯಿ ಮತ್ತು ಪತ್ನಿಯನ್ನು ಭೇಟಿ ಮಾಡಲು ಸಿಂಧೂರಿಗೆ ಬಂದಾಗ ಪೊಲೀಸರು ಅವನನ್ನು ಬಂಧಿಸಿ ಬೆಳಗಾವಿಯ ಹಿಂಡಲಗಾ ಜೈಲಿಗೆ ಕರೆದೊಯ್ದರು. ಆದರೆ ಅಲ್ಲಿಂದಲೂ ಅವನು ತಪ್ಪಿಸಿಕೊಂಡು ಮತ್ತೆ ತನ್ನ ತಂಡದೊಂದಿಗೆ ಹೋರಾಟ ಮುಂದುವರೆಸಿದನು.
ಊಟ ಮಾಡುತ್ತಿರುವಾಗ ಗುಂಡು ಹಾರಿಸುತ್ತಿರುವ ದ್ರೋಹಿಗಳು (ಕಾಲ್ಪನಿಕ)
ಅಂತಿಮವಾಗಿ ಬ್ರಿಟಿಷರ ಒತ್ತಡದಿಂದ ಕೆಲವು ಸ್ಥಳೀಯರ ದ್ರೋಹದಿಂದ ಲಕ್ಷ್ಮಣ ಸಿಕ್ಕಿಬಿದ್ದನು. 1922ರ ಜುಲೈ 15ರಂದು ಬೀಳಗಿ ಸಮೀಪದ ಕಪ್ಪರ ಪಡಿಯಮ್ಮನ ಗುಡ್ಡದಲ್ಲಿ ಅವನ ಮೇಲೆ ಗುಂಡು ಹಾರಿಸಲಾಯಿತು. ರಕ್ತದ ಮಡುವಿನಲ್ಲಿ ಬಿದ್ದ ಅವನ ದೇಹವನ್ನು ನಂತರ ಪೊಲೀಸರು ಬೀಳಗಿಗೆ ತೆಗೆದುಕೊಂಡು ಬಂದರು ಮತ್ತು ಅಲ್ಲಿ ಸಮಾಧಿ ಮಾಡಲಾಯಿತು.
ಸಿಂಧೂರ ಲಕ್ಷ್ಮಣನ ಕೊನೆಯ ಚಿತ್ರ
ಸಿಂಧೂರ ಲಕ್ಷ್ಮಣನ ಸಾವಿನ ಸುದ್ದಿ ತಿಳಿದಾಗ ಸಾವಿರಾರು ಜನರು ಅವನನ್ನು ನೋಡಲು ಸೇರಿದರು. ಬ್ರಿಟಿಷರು ತೆಗೆದ ಅವನ ಒಂದು ಚಿತ್ರ ಮಾತ್ರ ಇಂದಿಗೂ ಅವನ ಏಕೈಕ ದೃಶ್ಯ ಸಾಕ್ಷಿಯಾಗಿ ಉಳಿದಿದೆ.
ಇಂಗ್ಲೀಷ್ ಆಡಳಿತದ ದಾಖಲೆಗಳಲ್ಲಿ ಅವನ ಹೆಸರು ದರೋಡೆಕೋರನೆಂದು ದಾಖಲಾದರೂ, ಜನರ ಮನಸ್ಸಿನಲ್ಲಿ ಅವನು ಬಡವರಿಗಾಗಿ ಹೋರಾಡಿದ ವೀರನಾಗಿಯೇ ಉಳಿದಿದ್ದಾನೆ. ಅವನ ಸಾಹಸಗಳನ್ನು ಜನರು ಇಂದಿಗೂ ಜಾನಪದ ಹಾಡುಗಳಲ್ಲಿ ಮತ್ತು ಲಾವಣಿಗಳಲ್ಲಿ ಹಾಡುತ್ತಾರೆ.
ಬೀಳಗಿ ಪಟ್ಟಣದಲ್ಲಿರುವ ಸಿಂಧೂರ ಲಕ್ಷ್ಮಣನ ಸ್ಮಾರಕ ಭವನ
ಬೀಳಗಿಯಲ್ಲಿ ಇರುವ ಅವನ ಸಮಾಧಿ ಇಂದು ಕೂಡಾ ಆ ಶತಮಾನ ಹಿಂದಿನ ಹೋರಾಟದ ನೆನಪನ್ನು ಉಳಿಸಿಕೊಂಡಿದೆ. ಹಲವಾರು ವರ್ಷಗಳ ಬಳಿಕ ಸ್ಥಳೀಯರ ಪ್ರಯತ್ನದಿಂದ ಸಮಾಧಿ ಸ್ಥಳದಲ್ಲಿ ಸ್ಮಾರಕ ನಿರ್ಮಿಸಲಾಗಿದೆ. ಜನರ ಹೃದಯದಲ್ಲಿ ಜೀವಂತವಾಗಿರುವ ಈ ವೀರನ ಕಥೆ ಉತ್ತರ ಕರ್ನಾಟಕದ ಇತಿಹಾಸದಲ್ಲಿ ಅಳಿಯದ ಅಧ್ಯಾಯವಾಗಿದೆ.