ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು: ಕಲಬುರಗಿ ಇತಿಹಾಸ ಪರಿಚಯ

kalaburagi gulbarga fort history
ಕಲಬುರಗಿ ಶರಣಬಸವೇಶ್ವರ ಜಾತ್ರೆ 
ತೊಗರಿ ಕಣಜ ಎಂದೇ ಪ್ರಸಿದ್ಧಿ ಪಡೆದಿರುವ ಕಲಬುರಗಿ ಕರ್ನಾಟಕದ ಉತ್ತರ ಭಾಗದಲ್ಲಿರುವ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಆರ್ಥಿಕವಾಗಿ ಮಹತ್ವದ ಜಿಲ್ಲೆ. ಹಲವು ಭಾಷೆಗಳು, ಧರ್ಮಗಳು, ಸಂಪ್ರದಾಯಗಳು ಒಂದೇ ನೆಲದಲ್ಲಿ ಬೆರೆತು ಬದುಕುತ್ತಿರುವ ಈ ಊರು ನಿಜಕ್ಕೂ ಸಂಸ್ಕೃತಿಗಳ ಸಂಗಮಸ್ಥಳ. ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಎಂದು ಕರೆಯಲ್ಪಡುವ ಕಲಬುರಗಿ ತನ್ನ ವೈಭವಯುತ ಇತಿಹಾಸ, ಸಮೃದ್ಧ ಕೃಷಿ ಪರಂಪರೆ, ಶೈಕ್ಷಣಿಕ ಬೆಳವಣಿಗೆ ಹಾಗೂ ಧಾರ್ಮಿಕ ಸೌಹಾರ್ದತೆಯಿಂದ ರಾಜ್ಯದ ಗಮನ ಸೆಳೆದಿದೆ.

ಕಲಬುರಗಿ ಎಂಬ ಹೆಸರಿನ ಹಿನ್ನೆಲೆ

ಕಲಬುರಗಿ ಎಂಬ ಪದಕ್ಕೆ ಕಲ್ಲಿನ ಭೂಮಿ ಎಂಬ ಅರ್ಥವಿದೆ. ಇತಿಹಾಸದ ದಾಖಲೆಗಳ ಪ್ರಕಾರ, ಈ ಪ್ರದೇಶವನ್ನು ಹಿಂದೆ ಕಲುಂಬರಗಿ ಎಂದು ಕರೆಯಲಾಗುತ್ತಿತ್ತು. ಬಳಿಕ ಗುಲಬರ್ಗಾ ಎಂಬ ಹೆಸರು ಪ್ರಚಲಿತಕ್ಕೆ ಬಂತು. ಗುಲ್ ಎಂದರೆ ಹೂವು, ಬರ್ಗಾ ಎಂದರೆ ತೋಟ. ಹೀಗಾಗಿ ಗುಲಬರ್ಗಾ ಅಂದರೆ 'ಹೂಗಳ ತೋಟ'. 2014ರಲ್ಲಿ ಈ ಐತಿಹಾಸಿಕ ನಗರಕ್ಕೆ ಮರಳಿ “ಕಲಬುರಗಿ” ಎಂಬ ಮೂಲ ಹೆಸರು ನೀಡಲಾಯಿತು.

2010ರಲ್ಲಿ ಜಿಲ್ಲೆಯ ಪುನರ್‌ವಿಂಗಡಣೆಯ ಮೂಲಕ ಯಾದಗಿರಿ ಹೊಸ ಜಿಲ್ಲೆಯಾಗಿ ರೂಪುಗೊಂಡಿತು. ಇಂದಿಗೆ ಕಲಬುರಗಿ ಜಿಲ್ಲೆಯಲ್ಲಿ ಆಳಂದ, ಅಫಜಲಪುರ, ಜೇವರ್ಗಿ, ಸೇಡಂ, ಚಿತಾಪುರ, ಚಿಂಚೋಳಿ ಸೇರಿದಂತೆ ಒಟ್ಟು 11 ತಾಲ್ಲೂಕುಗಳಿವೆ.

ಇದನ್ನೂ ಓದಿ: 800 ವರ್ಷಗಳ ಭವ್ಯ ಇತಿಹಾಸದ ಕಲಬುರಗಿ ಕೋಟೆ

kalaburagi gulbarga fort history
ರೈಲು ನಿಲ್ದಾಣದಲ್ಲಿರುವ ಗುಲಬರ್ಗಾ ಬೋರ್ಡ್

ತೊಗರಿ ಕಣಜ – ಕೃಷಿಯ ಹೃದಯಭೂಮಿ

ಭಾರತದಲ್ಲೇ ಅತಿಹೆಚ್ಚು ತೊಗರಿ ಬೆಳೆಯುವ ಪ್ರದೇಶ ಎಂಬ ಖ್ಯಾತಿ ಕಲಬುರಗಿಯದ್ದು. ಸುಮಾರು 6 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆದಿದ್ದು, ದೇಶದ ದಾಳಿನ ಅವಶ್ಯಕತೆಗೆ ಈ ಜಿಲ್ಲೆ ಮಹತ್ವದ ಕೊಡುಗೆ ನೀಡುತ್ತದೆ. ಕಪ್ಪು ಮಣ್ಣು ಹಾಗೂ ಅಲ್ಪಮಳೆಯ ವಾತಾವರಣ ತೊಗರಿ ಬೆಳೆಗಳಿಗೆ ಅನುಕೂಲಕರವಾಗಿದೆ.

kalaburagi gulbarga fort history
ತೊಗರಿ
ಜಿಲ್ಲೆಯ ಪ್ರಮುಖ ನದಿಗ ಭೀಮಾ. ಕೃಷ್ಣ ಮೇಲ್ದಂಡೆ ಯೋಜನೆ ಈ ಭಾಗದ ಪ್ರಮುಖ ನೀರಾವರಿ ಯೋಜನೆ. ಕೃಷಿಯ ಜೊತೆಗೆ ಸುಣ್ಣದ ಕಲ್ಲು, ಸಿಮೆಂಟ್, ಜವಳಿ, ಚರ್ಮ ಹಾಗೂ ರಾಸಾಯನಿಕ ಕೈಗಾರಿಕೆಗಳೂ ಸಾವಿರಾರು ಜನರಿಗೆ ಉದ್ಯೋಗಾವಕಾಶ ಒದಗಿಸುತ್ತಿವೆ.
kalaburagi gulbarga fort history
ರೊಟ್ಟಿ ಊಟ

ರುಚಿಗಳ ಸಂಭ್ರಮ

ಕಲಬುರಗಿ ಎಂದರೆ ಕೇವಲ ಇತಿಹಾಸವಲ್ಲ, ಅದೊಂದು ರುಚಿಗಳ ನಗರವೂ ಹೌದು. ಬಿಳಿಜೋಳದ ರೊಟ್ಟಿ, ಗಟ್ಟಿಬ್ಯಾಳಿ, ಪುಂಡಿಪಲ್ಯ, ಶೇಂಗಾ ಹಿಂಡಿ ಇಲ್ಲಿನ ಸಾಂಪ್ರದಾಯಿಕ ಆಹಾರಗಳು. ಮಧ್ಯಪ್ರಾಚ್ಯ ಪ್ರಭಾವದಿಂದ ಬಂದ ‘ಮಾಲ್ದಿ’ ಸಿಹಿ ಹಾಗೂ ಮಾಮುಪುರಿ ಶೈಲಿಯ ಬಿರಿಯಾನಿ ಇಲ್ಲಿನ ವಿಶೇಷತೆ. ಜೊತೆಗೆ ಇರಾನಿ ಚಹಾ ಇಲ್ಲಿ ಸಂಸ್ಕೃತಿಯ ಭಾಗವಾಗಿದೆ. ದೇಶಿ-ವಿದೇಶಿ ಸಂಸ್ಕೃತಿಗಳ ಸಂಯೋಜನೆ ಇಲ್ಲಿ ಊಟದಲ್ಲೂ ಸ್ಪಷ್ಟವಾಗಿ ಕಾಣುತ್ತದೆ.

kalaburagi gulbarga fort history
ಮಾಮುಪುರಿ

ಶೈಕ್ಷಣಿಕ ಕೇಂದ್ರವಾಗಿ ಬೆಳವಣಿಗೆ

ಕಲಬುರಗಿ ಇಂದು ಕಲ್ಯಾಣ ಕರ್ನಾಟಕದ ಪ್ರಮುಖ ಶೈಕ್ಷಣಿಕ ಕೇಂದ್ರ. ಗುಲಬರ್ಗಾ ವಿಶ್ವವಿದ್ಯಾಲಯ ಹಾಗೂ ಕೇಂದ್ರೀಯ ವಿಶ್ವವಿದ್ಯಾಲಯ ಕರ್ನಾಟಕ ಸೇರಿದಂತೆ ಅನೇಕ ಮೆಡಿಕಲ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದರಿಂದ ಉತ್ತರ ಕರ್ನಾಟಕದ ಸಾವಿರಾರು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶಗಳು ಲಭಿಸುತ್ತಿವೆ.

ರಾಜಕೀಯ ಮಹತ್ವ

ರಾಜ್ಯ ರಾಜಕಾರಣದಲ್ಲಿ ಕಲಬುರಗಿಯ ಪ್ರಭಾವ ಗಮನಾರ್ಹ. ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ವೀರೇಂದ್ರ ಪಾಟೀಲ್ ಹಾಗೂ ಎನ್. ಧರಮ್ ಸಿಂಗ್ ಈ ಜಿಲ್ಲೆಯವರೇ. ಇತ್ತೀಚಿನ ರಾಷ್ಟ್ರೀಯ ರಾಜಕಾರಣದಲ್ಲಿ ಪ್ರಮುಖ ವ್ಯಕ್ತಿಯಾಗಿರುವ ಮಲ್ಲಿಕಾರ್ಜುನ ಖರ್ಗೆ ಕೂಡ ಕಲಬುರಗಿಯವರೇ.

kalaburagi gulbarga fort history
ಮಲ್ಲಿಕಾರ್ಜುನ ಖರ್ಗೆ

ವೈಭವಯುತ ಇತಿಹಾಸ

ಕಲಬುರಗಿಯ ಇತಿಹಾಸವು ಹಲವು ಸಾಮ್ರಾಜ್ಯಗಳ ಏರುಪೇರುಗಳನ್ನು ಕಂಡಿದೆ. ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು, ಬಹಮನಿ ಸುಲ್ತಾನರು, ನಿಜಾಮರು ಈ ಪ್ರದೇಶವನ್ನು ಆಳಿದ್ದಾರೆ.

9ನೇ ಶತಮಾನದಲ್ಲಿ ರಾಷ್ಟ್ರಕೂಟ ಸಾಮ್ರಾಟ ಅಮೋಘವರ್ಷ ನೃಪತುಂಗ ಸೇಡಂ ತಾಲೂಕಿನ ಮಳಖೇಡವನ್ನು ರಾಜಧಾನಿಯಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದರು. ಆಗ ಈ ಸ್ಥಳವನ್ನು “ಮಾನ್ಯಖೇಟ” ಎಂದು ಕರೆಯಲಾಗುತ್ತಿತ್ತು. ಅವರ ಕಾಲದಲ್ಲಿ ರಚಿತವಾದ ಕನ್ನಡದ ಪ್ರಥಮ ಗ್ರಂಥವೆಂದು ಪರಿಗಣಿಸಲ್ಪಡುವ ಕವಿರಾಜಮಾರ್ಗ ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಮಹತ್ವದ್ದಾಗಿದೆ.

kalaburagi gulbarga fort history
ಕಲಬುರಗಿ ಕೋಟೆಯಲ್ಲಿರುವ ತೋಪು

1347ರಲ್ಲಿ ದೆಹಲಿ ಸುಲ್ತಾನ ವಿರುದ್ಧ ದಂಗೆ ಎದ್ದ ಅಲ್ಲೌದ್ದೀನ್ ಹಸನ್ ಗಂಗು ಬಹಮನ ಶಾ ಕಲಬುರಗಿಯನ್ನು ರಾಜಧಾನಿಯಾಗಿ ಮಾಡಿಕೊಂಡು ಬಹಮನಿ ಸಾಮ್ರಾಜ್ಯ ಸ್ಥಾಪಿಸಿದರು. ಆಗ ನಗರವನ್ನು “ಹಸನಾಬಾದ್” ಎಂದು ಕರೆಯಲಾಗುತ್ತಿತ್ತು. ಬಳಿಕ ರಾಜಧಾನಿಯನ್ನು ಬೀದರ್‌ಗೆ ವರ್ಗಾಯಿಸಲಾಯಿತು.

17ನೇ ಶತಮಾನದಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬ್ ಈ ಪ್ರದೇಶವನ್ನು ತನ್ನ ಆಳ್ವಿಕೆಗೆ ಸೇರಿಸಿಕೊಂಡರು. ನಂತರ ಹೈದರಾಬಾದ್ ನಿಜಾಮರ ಅಧೀನಕ್ಕೆ ಸೇರಿತು. 1948ರ ಸೆಪ್ಟೆಂಬರ್ 17ರಂದು ಹೈದರಾಬಾದ್ ಸಂಸ್ಥಾನ ಭಾರತ ಗಣರಾಜ್ಯಕ್ಕೆ ವಿಲೀನವಾಯಿತು. 1956ರ ಭಾಷಾವಾರು ರಾಜ್ಯ ಪುನರ್‌ವಿಂಗಡಣೆಯ ಮೂಲಕ ಕಲಬುರಗಿ ಮೈಸೂರು ರಾಜ್ಯಕ್ಕೆ ಸೇರಿತು.

ಧಾರ್ಮಿಕ ಮತ್ತು ಪ್ರವಾಸಿ ತಾಣಗಳು

ಶರಣ ಬಸವೇಶ್ವರ ದೇವಸ್ಥಾನ

ಕಲಬುರಗಿಯ ಪ್ರಮುಖ ಧಾರ್ಮಿಕ ಕೇಂದ್ರವೆಂದರೆ ಶರಣ ಬಸವೇಶ್ವರ ದೇವಸ್ಥಾನ. ಶರಣ ಬಸವೇಶ್ವರರು ಬಸವಾದಿ ಶರಣರ ಸಂದೇಶಗಳನ್ನು ಪ್ರಚಾರ ಮಾಡುತ್ತ ಈ ಭಾಗವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡರು. ಇಂದು ಅವರ ಸಮಾಧಿ ಸ್ಥಳ ಭಕ್ತರ ಆರಾಧನಾ ಕೇಂದ್ರವಾಗಿದೆ.

kalaburagi gulbarga fort history
ಶರಣಬಸವೇಶ್ವರ ದೇವಸ್ಥಾನ

ಕಲಬುರಗಿ ಕೋಟೆ

ನಗರದ ಐತಿಹಾಸಿಕ ಸ್ಮಾರಕಗಳಲ್ಲಿ ಪ್ರಮುಖವಾದುದು ಕಲಬುರಗಿ ಕೋಟೆ. ಈ ಕೋಟೆ ಬಹಮನಿ ಕಾಲದ ವಾಸ್ತುಶಿಲ್ಪದ ಉದಾಹರಣೆ. ಇಲ್ಲಿ 26 ತೋಪುಗಳಿದ್ದು, ಅವುಗಳಲ್ಲಿ ಪ್ರಸಿದ್ಧವಾದದ್ದು 29 ಅಡಿ ಉದ್ದದ ‘ಬಾರಹ ಗಜ’ ತೋಪು. ಮಧ್ಯಕಾಲೀನ ಭಾರತದಲ್ಲಿ ತೋಪು ಬಳಕೆಯ ಆರಂಭದ ಸಾಕ್ಷಿಯಾಗಿ ಈ ಕೋಟೆ ಗುರುತಿಸಿಕೊಂಡಿದೆ.

kalaburagi gulbarga fort history
ಕಲಬುರಗಿ ಕೋಟೆ ಪ್ರವೇಶ ದ್ವಾರ

ಖ್ವಾಜಾ ಬಂದೇ ನವಾಜ್ ದರ್ಗಾ

14ನೇ ಶತಮಾನದಲ್ಲಿ ಸೂಫಿ ಸಂತ ಖ್ವಾಜಾ ಬಂದೇ ನವಾಜ್ ಕಲಬುರಗಿಗೆ ಬಂದು ನೆಲೆಸಿದ ನಂತರ ಈ ಪ್ರದೇಶ ಧಾರ್ಮಿಕ ಸೌಹಾರ್ದತೆಯ ಕೇಂದ್ರವಾಯಿತು. ಅವರ ಹೆಸರಿನಲ್ಲಿ ನಿರ್ಮಿತ ಖ್ವಾಜಾ ಬಂದೇ ನವಾಜ್ ದರ್ಗಾ ಪ್ರತಿವರ್ಷ ಉರುಸ್ ಸಂದರ್ಭದಲ್ಲಿ ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ.

ಇದನ್ನೂ ಓದಿ: ಸೌಹಾರ್ದ ಸಾರುವ ಖಾಜಾ ಬಂದೆ ನವಾಜ್ ದರ್ಗಾ

kalaburagi gulbarga fort history
ಖಾಜಾ ಬಂದೇ ನವಾಜ್ ದರ್ಗಾ

ಬುದ್ಧ ವಿಹಾರ

ಸುಮಾರು 70 ಎಕರೆ ಪ್ರದೇಶದಲ್ಲಿ ನಿರ್ಮಿತವಾದ ಬುದ್ಧ ವಿಹಾರ ಕಲಬುರಗಿ 2007ರಲ್ಲಿ ಉದ್ಘಾಟನೆಯಾಯಿತು. ಸಾಂಚಿ, ಅಜಂತಾ, ಎಲ್ಲೋರಾ ವಾಸ್ತುಶೈಲಿಯನ್ನು ಪ್ರತಿಬಿಂಬಿಸುವ ಈ ವಿಹಾರದಲ್ಲಿ 170 ಕಂಬಗಳ ಬೆಂಬಲದೊಂದಿಗೆ ವಿಶಾಲ ಪ್ರಾರ್ಥನಾ ಮಂದಿರವಿದೆ. ಸಾವಿರಾರು ಭಕ್ತರು ಒಂದೇ ಸಮಯದಲ್ಲಿ ಕುಳಿತು ಧ್ಯಾನಿಸಬಹುದಾದಷ್ಟು ವಿಶಾಲತೆ ಇದಕ್ಕಿದೆ.

kalaburagi gulbarga fort history
ಬುದ್ಧ ವಿಹಾರ

ಕಲಬುರಗಿ ಕೇವಲ ಒಂದು ಜಿಲ್ಲೆ ಅಲ್ಲ- ಅದು ಇತಿಹಾಸ, ಕೃಷಿ, ಸಂಸ್ಕೃತಿ, ಧಾರ್ಮಿಕ ಸೌಹಾರ್ದತೆ ಹಾಗೂ ಶಿಕ್ಷಣದ ಸಮಗ್ರ ಚಿತ್ರ. ತೊಗರಿ ಕಣಜದಿಂದ ಐತಿಹಾಸಿಕ ಕೋಟೆಗಳವರೆಗೆ, ಸೂಫಿ ಪರಂಪರೆಯಿಂದ ಬೌದ್ಧ ವಾಸ್ತುಶಿಲ್ಪದವರೆಗೆ, ರಾಜಕೀಯ ಪ್ರಭಾವದಿಂದ ಶೈಕ್ಷಣಿಕ ಬೆಳವಣಿಗೆಯವರೆಗೆ ಕಲಬುರಗಿ ಬಹುಮುಖ ವ್ಯಕ್ತಿತ್ವ ಹೊಂದಿದೆ.

ನವೀನ ಹಳೆಯದು